ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ನಡೆಸಲು ವಾರನುಗಟ್ಟಲೆ ಸಮುದ್ರದಲ್ಲಿಯೇ ಇರುವ ಮೀನುಗಾರರು ಶುದ್ಧ ಕುಡಿಯುವ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಇದು ಬೋಟ್ಗೆ ಹೊರೆಯೂ ಹೌದು. ಅಲ್ಲದೆ, ಸಾಕಷ್ಟು ಸ್ಥಳವೂ ವ್ಯರ್ಥವಾಗುತ್ತದೆ. ಅದಕ್ಕಾಗಿಯೇ ಸಮುದ್ರದ ಉಪ್ಪು ನೀರನ್ನೇ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ದೇಶದಲ್ಲಿಯೇ ಇಂತಹದ್ದೊಂದು ಪ್ರಯೋಗ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದಿದೆ. ಇನ್ನು ಮುಂದೆ ತಮ್ಮ ನಿತ್ಯಾವಶ್ಯಕತೆಯ ನೀರನ್ನು ತಮ್ಮೊಂದಿಗೆ ಒಯ್ಯಬೇಕೆಂದೇ ಇಲ್ಲ. ಈ ವಿನೂತನ ತಂತ್ರಜ್ಞಾನದಿಂದ ಸಮುದ್ರದ ಉಪ್ಪು ನೀರನ್ನು ಸಿಹಿನೀರಾಗಿ ಪರಿವರ್ತಿಸಬಹುದು. ಈ ಮೂಲಕ ಮೀನುಗಾರರು ತಮ್ಮ ನಿತ್ಯಾವಶ್ಯಕತೆಯ ನೀರಿನ ಬಗ್ಗೆ ಚಿಂತೆಯಿಲ್ಲದೆ ಮೀನುಗಾರಿಕೆ ನಡೆಸಬಹುದು.
ಏನಿದು ತಂತ್ರಜ್ಞಾನ?
ಆಸ್ಟ್ರೇಲಿಯಾದ ರೇಯನ್ಸ್ ರೈನ್ ಮ್ಯಾನ್ ಕಂಪೆನಿಯು ಈ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಮಂಗಳೂರಿನ ಬೋಟ್ ಒಂದಕ್ಕೆ ಅಳವಡಿಕೆ ಮಾಡಲಾಗಿದೆ. ಈ ಉಪಕರಣದಲ್ಲಿ ಎರಡು ಪೈಪ್ಗಳಿವೆ. ಒಂದು ಪೈಪ್ ಸಮುದ್ರದ ಉಪ್ಪುನೀರನ್ನು ಹೀರಿಕೊಳ್ಳುತ್ತದೆ. ಈ ಉಪ್ಪು ನೀರು ಉಪಕರಣದೊಳಗೆ ಶುದ್ಧವಾಗುತ್ತದೆ. ಬಳಿಕ ಮತ್ತೊಂದು ಪೈಪ್ ಮೂಲಕ ಶುದ್ಧ ನೀರು ಬರುತ್ತದೆ.