ಮಂಗಳೂರು: ಸಮಾಜದಲ್ಲಿ ಶೋಷಿತರಾಗಿರುವವರ ಕಣ್ಣೀರು ಒರೆಸಲೆಂದೇ ಸರ್ಕಾರೇತರ ಸಂಸ್ಥೆ ಅಥವಾ ಎನ್ಜಿಒಗಳು ಕಾರ್ಯನಿರ್ವಹಿಸುತ್ತವೆ. ಏನೂ ಇಲ್ಲದವರ ಪಾಲಿಗೆ ನೆರವಾಗುತ್ತಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಉದ್ದೇಶದಿಂದಲೇ ಅದೆಷ್ಟೋ ಎನ್ಜಿಒಗಳು ಹುಟ್ಟಿಕೊಂಡಿವೆ. ಈ ನಕಲಿ ಎನ್ಜಿಒಗಳ ಜಾಲ ಎಲ್ಲೆಡೆ ಹಬ್ಬಿದೆಯೇ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಎನ್ಜಿಒಗಳಿವೆಯೇ? ಇಲ್ಲಿದೆ ಒಂದಿಷ್ಟು ಮಾಹಿತಿ.
ಸಮಾಜ ಸೇವೆ ಮಾಡಬೇಕೆಂಬ ಹಂಬಲದಲ್ಲಿ ಹಲವೆಡೆ ಸಾವಿರಾರು ಸಂಖ್ಯೆಗಳಲ್ಲಿ ಎನ್ಜಿಒಗಳು ಹುಟ್ಟಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿಯಾಗಿ ಕಾರ್ಯನಿರ್ವಹಿಸುವ ಎನ್ಜಿಒಗಳ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ನಕಲಿ ಎನ್ಜಿಒಗಳು ಎನ್ಜಿಒಗಳನ್ನು ಆರಂಭಿಸಬೇಕಿದ್ದರೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಆರಂಭಿಸಬೇಕಾಗುತ್ತದೆ. ಕಾಲಕಾಲಕ್ಕೆ ಹಣಕಾಸು ವ್ಯವಹಾರದ ಬಗ್ಗೆ ಲೆಕ್ಕಪತ್ರಗಳನ್ನು ನೀಡಬೇಕಾಗುತ್ತದೆ. ಹಣ ಸಂಗ್ರಹಕ್ಕೆ ಸಂಬಂಧಿಸಿ, ಸರ್ಕಾರದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಾಗುತ್ತದೆ.
ಅನಾಥ ಮಕ್ಕಳು, ವೃದ್ಧರು, ಮಹಿಳೆಯರಿಗೆ ರಕ್ಷಣೆ ಸೇರಿದಂತೆ ಇನ್ನೂ ಹತ್ತು ಹಲವು ಕಾರಣದಿಂದ ಹಲವು ಎನ್ಜಿಒ ಸಂಸ್ಥೆಗಳು ಆರಂಭವಾಗುತ್ತವೆ. ಇವೆಲ್ಲವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನೋಂದಾಣಿಯಾಗಬೇಕು. ಹೀಗೆ ನೋಂದಾಣಿಯಾದ ಎನ್ಜಿಒಗಳು ಸರ್ಕಾರದ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ.
ಓದಿ: ಕೋವಿಡ್ ಎಫೆಕ್ಟ್: ಕೆಲವರು ಶಾಲೆ ಬಿಟ್ಟರು, ಹಲವರು ಸರ್ಕಾರಿ ಶಾಲೆಗೆ ಸೇರಿದರು - ಉಳಿದವರು?
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರನ್ನು ವಂಚಿಸುತ್ತಿರುವ ಎನ್ಜಿಒಗಳ ಬಗ್ಗೆ ಯಾವುದೇ ದೂರುಗಳು ಈವರೆಗೆ ಬಂದಿಲ್ಲ. ಇಂತಹ ಪ್ರಕರಣಗಳು ಕಂಡುಬಂದರೆ ಸರ್ಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಎನ್ಜಿಒಗಳು ಇರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ವಂಚನೆ ಮಾಡುವ ಎನ್ಜಿಒಗಳ ಇರುವಿಕೆ ಈವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ಮಾಹಿತಿಗಳಿದ್ದರೆ ನೀಡುವಂತೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ವಿನಂತಿಸಿದೆ.