ಕರ್ನಾಟಕ

karnataka

By

Published : Jun 26, 2021, 9:23 AM IST

Updated : Jun 26, 2021, 10:28 AM IST

ETV Bharat / state

ಹಡಿಲು ಭೂಮಿಯಲ್ಲಿ ಕೃಷಿ.. ಕಾನೂನು ತೊಡಕು ನಿವಾರಣೆಗೆ ಚಿಂತನೆ: ಸಚಿವ ಬಿ.ಸಿ. ಪಾಟೀಲ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಎಕರೆ ಹಡಿಲು‌ ಭೂಮಿ ಇದೆ. ಇದಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಮತ್ತು ಸಹಕಾರ ಸಂಸ್ಥೆ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

mangalore
ಮಂಗಳೂರು

ಮಂಗಳೂರು: ರೈತರಿಗೆ ಕೃಷಿ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ. ಹಡಿಲು ಭೂಮಿಯಲ್ಲಿ ಕೃಷಿಗೆ ಒತ್ತು ನೀಡಲು ಸರ್ಕಾರ ಯೋಜಿಸಿದೆ. ಈ ಭೂಮಿಯಲ್ಲಿ ಕೃಷಿ ಮಾಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಚಿಂತನೆ ನಡೆಸಲಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಪೂರ್ವ ಸಿದ್ಧತೆಯ ಪರಿಶೀಲನೆ ಸಭೆಯ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಎಕರೆ ಹಡಿಲು‌ ಭೂಮಿ ಇದೆ. ಇದಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಮತ್ತು ಸಹಕಾರ ಸಂಸ್ಥೆ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ಮಾಡಲಾಗಿದೆ ಎಂದರು.

ಸಚಿವ ಬಿ.ಸಿ. ಪಾಟೀಲ್

ಜಿಲ್ಲೆಯಲ್ಲಿ ಲಭ್ಯವಿರುವ 3 ಸಾವಿರ ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸಲಾಗಿದೆ. ಕರಾವಳಿ ಭೌಗೋಳಿಕವಾಗಿ ವಿಭಿನ್ನವಾಗಿರುವುದರಿಂದ ಇಲ್ಲಿನ ಕೃಷಿ ಚಟುವಟಿಕೆಗಳು ಕೂಡ ಇತರ ಜಿಲ್ಲೆಗಿಂತ ಭಿನ್ನವಾಗಿದೆ. ಇಲ್ಲಿನ ಕೃಷಿಗೆ ಪೂರಕವಾಗಿ ಸೂಕ್ತ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಯಾಂತ್ರೀಕರಣ ಭತ್ತ ನಾಟಿಗೆ ಚಾಲನೆ:

ನಗರದ ಕುಂಜತ್ತಬೈಲ್ ಪ್ರದೇಶದಲ್ಲಿ‌ ದಿ.ಕಾಂತಣ್ಣ ಶೆಟ್ಟಿ ಅವರು ಹಡಿಲು ಭೂಮಿಯಲ್ಲಿ ಮಾಡದಡಿಗುಡ್ಡೆ ಫ್ರೆಂಡ್ಸ್ ಅವರ‌ ಮುತುವರ್ಜಿಯಿಂದ ಯಾಂತ್ರೀಕರಣ ಭತ್ತ ನಾಟಿ ನಡೆಸುತ್ತಿದ್ದು, ಇದಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಚಾಲನೆ ನೀಡಿದರು.

ಬಳಿಕ‌ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಭತ್ತದ ಬೆಲೆ ಒಂದು ಹೆಕ್ಟೇರ್ ಗೆ 7,500 ರೂ. ಪ್ಯಾಕೇಜ್ ಇದ್ದು, ಈಗ ನಿಲ್ಲಿಸಲಾಗಿದೆ. ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ನಮ‌್ಮ ಗಮನಕ್ಕೆ ತಂದಿದ್ದು, ಮುಂದುವರಿಸಲು ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ‌8 ಸಾವಿರ ಎಕರೆಯಷ್ಟು ಕೃಷಿ ಭೂಮಿ ಹಡಿ‌ಲು ಬಿದ್ದಿದ್ದು, ಇದರಲ್ಲಿ ಉಳುಮೆ ಮಾಡಿ ಉತ್ಪಾದನೆ ಮಾಡಿದಲ್ಲಿ ರಾಷ್ಟ್ರದ ಆದಾಯ ಹೆಚ್ಚಳವಾಗುತ್ತದೆ‌. ಈ‌ ಮೂಲಕ ಕೃಷಿಕ ಸದೃಢನಾಗಿ ಸ್ವಾವಲಂಬಿಯಾಗಬೇಕು. ರೈತ ಯಾವಾಗ ಸಂತುಷ್ಟನಾಗುತ್ತಾನೋ, ಆಗ ಭಾರತ ಸಮೃದ್ಧವಾಗಲು ಸಾಧ್ಯ. ಹಡಿಲು ಭೂಮಿಯಲ್ಲಿ ಕೃಷಿ ಮಾಡುವುದು ನಿಜಕ್ಕೂ ಸಂತಸದ ವಿಚಾರ. ಅಲ್ಲದೇ ಹಡಿಲು ಭೂಮಿಗೆ ಕೃಷಿ ಇಲಾಖೆಯಿಂದ ಯಾವ ರೀತಿ ಬೆಂಬಲ ನೀಡಬೇಕೋ ಅದನ್ನು ಸರ್ಕಾರ ನೀಡುತ್ತದೆ ಎಂದು ಸಚಿವರು ಅಭಯ ನೀಡಿದರು.

ರೈತರಿಗೆ ಟಿಲ್ಲರ್:

ನೂತನವಾಗಿ ಸರ್ಕಾರದಿಂದ ರೂಪಿತವಾದ 'ಫಾರಂ ಬ್ಯಾಂಕಿಂಗ್' ಯೋಜನೆಯ ಮೂಲಕ‌ ಟಿಲ್ಲರ್​​ಗಳನ್ನು ರೈತರಿಗೆ ನೀಡಲಾಗಿದೆ. ಗ್ರಾಮವೊಂದರಲ್ಲಿ‌ 20 ರೈತರು ಸೇರಿ ಕೃಷಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿದಲ್ಲಿ, ಅವರು 2 ಲಕ್ಷ ರೂ. ಹಾಕಿದರೆ ಸರ್ಕಾರ 8 ಲಕ್ಷ ರೂ. ಅನುದಾನ ನೀಡುತ್ತದೆ. ಈ 10 ಲಕ್ಷ ರೂ.ನಲ್ಲಿ ಟಿಲ್ಲರ್ ಹಾಗೂ ಉಳುಮೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಂಡು‌ 20 ಮಂದಿ ರೈತರು ಟಿಲ್ಲರ್ ಅನ್ನು ಬಳಸಿಕೊಳ್ಳಬಹುದು. ಈಗಾಗಲೇ 100-200 ಟಿಲ್ಲರ್​​ಗಳನ್ನು ನೀಡಲಾಗಿದ್ದು, ಈ ವರ್ಷ ಇನ್ನೂ ಹೆಚ್ಚಳ ಮಾಡಲಾಗುತ್ತದೆ ಎಂದು ಕೃಷಿ ಸಚಿವರು ತಿಳಿಸಿದರು.

ಬಿತ್ತನೆ ಬೀಜದ ಕೊರತೆಯಾಗಿಲ್ಲ:

ಭತ್ತಕ್ಕೆ ಬೆಂಬಲ ಬೆಲೆಯಿದ್ದು, ಬಿತ್ತನೆಗೆ ಬೇಕಾದಷ್ಟು ಬೀಜವನ್ನು‌ ಬೆಳೆಯಲು ಬೇಕಾದ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಬಳಿ ಬೇಡಿಕೆಯಿಡಲಾಗಿದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಬೀಜ, ಗೊಬ್ಬರದ ತೊಂದರೆಯಿಲ್ಲ. ಬೀದರ್​​ನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 15,600 ಕ್ವಿಂಟಾಲ್ ಹೆಚ್ಚುವರಿ ಸೋಯಾ ಬೀನ್ ಬೀಜ ನೀಡಿದ್ದರೂ, ಅಲ್ಲಿ ಅಧಿಕಾರಿಗಳು ಅದನ್ನು ದುರುಪಯೋಗ ಪಡಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಿಎಂ ಅವರೊಂದಿಗೆ ಮಾತನಾಡಿ, ನಾಲ್ಕು‌ ಜನ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆ. ಬಿತ್ತನೆ ಬೀಜ ಮಹಾರಾಷ್ಟ್ರ ಗಡಿಯಿಂದ ಆಚೆಗೆ ಹೋಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತದೆ. ಆದರೆ ದ.ಕ.ಜಿಲ್ಲೆಯಲ್ಲಿ ಭತ್ತದ ಬೀಜದ ಕೊರತೆ ಖಂಡಿತ ಆಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Last Updated : Jun 26, 2021, 10:28 AM IST

ABOUT THE AUTHOR

...view details