ಮಂಗಳೂರು: ಕರ್ನಾಟಕ ಸರ್ಕಾರ "ಐರಾವತ ಯೋಜನೆ"ಯಡಿ ಬ್ಯಾಂಕ್ ಸಬ್ಸಿಡಿ ಮೂಲಕ ನೀಡಲಾಗುವ ಕಾರನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನಗರದ ಸರ್ಕಿಟ್ ಹೌಸ್ನಲ್ಲಿ ಫಲಾನುಭವಿಗಳಿಗೆ ವಿತರಿಸಿದರು.
ಕರ್ನಾಟಕ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುವ ಈ ಕಾರುಗಳು ಊಬರ್ ಹಾಗೂ ಓಲಾ ಕಂಪನಿಗಳ ಸಹಯೋಗವನ್ನು ಹೊಂದಿದ್ದು, ಟ್ಯಾಕ್ಸಿ ವಾಹನವಾಗಿ ಫಲಾನುಭವಿಗಳಿಗೆ ಬಳಸುವ ಉದ್ದೇಶ ಹೊಂದಿದೆ.
ಕಾರುಗಳನ್ನು ವಿತರಿಸಿದ ಬಳಿಕ ಸಚಿವ ಖಾದರ್ ಮಾತನಾಡಿ, ಸ್ವಾವಲಂಬಿ ಬದುಕು ಸಾಗಿಸಲು ಕರ್ನಾಟಕ ಸರ್ಕಾರದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಉಚಿತವಾಗಿ ಬ್ಯಾಂಕ್ ಸಬ್ಸಿಡಿ ಮೂಲಕ ಕಾರು ವಿತರಣೆ ಮಾಡಲು 24 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ದ.ಕ. ಜಿಲ್ಲೆಯ 13 ಮಂದಿಗೆ ಕಾರು ವಿತರಿಸಲಾಯಿತು. ಹಿಂದೆ ಕೂಡ ಅನೇಕ ಯೋಜನೆಗಳನ್ನು ಸರ್ಕಾರ ನೀಡುತ್ತಿತ್ತು. ಕೆಲವೊಂದು ಲೋಪದೋಷಗಳಿಂದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿರಲಿಲ್ಲ. ಆದರೆ ಈ ಸಲ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಪರಿಶಿಷ್ಟ ವರ್ಗಗಳ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನಿಗಮದ ಅಧ್ಯಕ್ಷರು ಸೇರಿ ಪಾರದರ್ಶಕವಾಗಿ, ಯಾವುದೇ ರಾಜಕೀಯ ಒತ್ತಡವಿಲ್ಲದೆ ಆನ್ಲೈನ್ ಅರ್ಜಿ ಮುಖಾಂತರ ಫಲಾನುವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಫಲಾನುಭವಿಗಳಿಗೆ ಸಚಿವ ಯು.ಟಿ.ಖಾದರ್ ಕಾರು ವಿತರಣೆ ಅಲ್ಲದೆ ಕೊಡಲ್ಪಟ್ಟ ವಾಹನ ದುರುಪಯೋಗ ಆಗಬಾರದೆಂದು ನೇರವಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಓಲಾ ಹಾಗೂ ಊಬರ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾಳೆಯಿಂದ ಈ ಕಾರುಗಳು ಓಲಾ ಹಾಗೂ ಊಬರ್ ಟ್ಯಾಕ್ಸಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಆದ್ದರಿಂದ ಯೋಜನೆಯು ಅರ್ಹರಿಗೆ ದೊರಕಬೇಕೆಂದು ಎಲ್ಲಾ ಪ್ರಕ್ರಿಯೆಗಳನ್ನು ನಿಯಮಬದ್ಧವಾಗಿ ಪಾಲಿಸಲಾಗಿದೆ ಎಂದರು.