ಮಂಗಳೂರು :ನಗರದ ಮೆಡಿಕಲ್, ನರ್ಸಿಂಗ್ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಕೇರಳದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದೆ.
ಈ ಹಿನ್ನೆಲೆ ಎಲ್ಲಾ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರೆಲ್ಲರನ್ನೂ ಕೋವಿಡ್ ತಪಾಸಣೆಗೊಳಪಡಿಸಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಕೋವಿಡ್ ತಪಾಸಣೆ ನಡೆಸದೆ ಅವರನ್ನು ಕಾಲೇಜುಗಳಿಗೆ ತೆಗೆದುಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಾಗುತ್ತದೆ ಎಂದು ತಿಳಿಸಿದರು.
ಕೇರಳ ಹಾಗೂ ದ.ಕ.ಜಿಲ್ಲೆಯ ಗಡಿ ಭಾಗಗಳಲ್ಲಿ ನಿತ್ಯ ಸಂಚಾರ ನಡೆಸುವವರಿಗೆ 15 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ನಡೆಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಲಾಕ್ಡೌನ್ ಸಂದರ್ಭದಲ್ಲಿ 1000 ಮಂದಿ ಕೋವಿಡ್ ಪಾಸ್ ಪಡೆದುಕೊಂಡಿದ್ದು, 500ರಷ್ಟು ಅಧಿಕಾರಿಗಳ ಮೂಲಕ ಅವರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅವರ ಸುತ್ತಮುತ್ತಲು ಇರುವವರನ್ನು 15 ದಿನಗಳಿಗೊಮ್ಮೆ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ.
ಗಡಿ ಪ್ರದೇಶವಾದ್ದರಿಂದ ಜನಸಂಚಾರಕ್ಕೆ ಯಾವುದೇ ತೊಂದರೆ ಮಾಡದೆ ಕೋವಿಡ್ ನಿಗ್ರಹ ಮಾಡುವುದು ಬಹಳ ಸವಾಲಿನ ಕೆಲಸ. ಆದ್ದರಿಂದ ಜಿಲ್ಲಾಡಳಿತದ ಮೂಲಕ ಕೋವಿಡ್ ಸೋಂಕು ಉಲ್ಬಣವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.