ಕಡಬ :ತಾಲೂಕಿನಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಇಲ್ಲಿನ ಜನರು ಪರದಾಡುತ್ತಿದ್ದು, ಜನರು ಪುತ್ತೂರು, ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿಯಿದೆ.
ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಿಂದ ಬಿಪಿಎಲ್ ಪಡಿತರದಾರರಿಗೆ ವಾರ್ಷಿಕ ಐದು ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಪಡಿತರದಾರಿಗೆ ಶೇ.30ರಷ್ಟು ಉಚಿತ ಚಿಕಿತ್ಸೆಗಳ ಸೌಲಭ್ಯ ಇದೆ. ಈಗಾಗಲೇ ಸರ್ಕಾರ ಈ ಆಯುಷ್ಮಾನ್ ಯೋಜನೆ ಮೂಲಕ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ದ.ಕ.ಜಿಲ್ಲೆಯಲ್ಲಿ ಸುಮಾರು 40 ಆಸ್ಪತ್ರೆಗಳ ಹೆಸರು ಪಟ್ಟಿಯಲ್ಲಿದ್ದರೂ ಪ್ರಮುಖ ಕಡಬ ಸಮುದಾಯ ಆಸ್ಪತ್ರೆ ಆಗಲಿ, ಕಡಬ ತಾಲೂಕಿನ ಯಾವುದೇ ಆಸ್ಪತ್ರೆಗಳಾಗಲಿ ಇದರಲ್ಲಿ ಒಳಗೊಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ತಾಲೂಕಿನಲ್ಲಿ ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಭವ್ಯ ಆಸ್ಪತ್ರೆ ಕಟ್ಟಲಾಗಿದೆ. ಅದರಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಚಿಕಿತ್ಸೆಗಳೆ ಇಲ್ಲದಂತಾಗಿದೆ. ಇದರಿಂದ ಜನ ಸಣ್ಣಪುಟ್ಟ ಕಾಯಿಲೆಗಳಿಗೂ ಪುತ್ತೂರು, ಮಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾದ ಸ್ಥಿತಿಯಿದೆ. ಈ ಕುರಿತು ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಮಾತನಾಡಿದ್ದು, ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಸೌಲಭ್ಯವನ್ನು ಕಡಬದ ಆಸ್ಪತ್ರೆಗೆ ನೀಡಬೇಕಾದ್ರೆ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳಿರಬೇಕಾಗುತ್ತದೆ. ಕಡಬ ಸಮುದಾಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳಿಲ್ಲ. ಇಲ್ಲದೆ ಇರುವುದರಿಂದ ಅಲ್ಲಿಗೆ ಈ ವ್ಯವಸ್ಥೆ ನೀಡಲಾಗಿಲ್ಲ. ತಜ್ಞ ವೈದ್ಯರ ನೇಮಕ ಬಳಿಕವೇ ಆಯುಷ್ಮಾನ್ ಸೌಲಭ್ಯ ನೀಡಲಾಗುತ್ತದೆ ಎಂದರು.