ಮಂಗಳೂರು: ತುಳು ಸೇರಿ ಪಂಚಭಾಷೆಗಳಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಾಣ ಮಾಡುವ ಕನಸು ಹೊತ್ತಿದ್ದೇನೆ ಎಂದು ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಜೇಂದ್ರ ಸಿಂಗ್ಬಾಬು ಹೇಳಿದ್ದಾರೆ.
ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ಸಂಬಂಧ ಹೊಂದಿರುವ ನಾನು ಕಂಬಳದ ಬಗ್ಗೆ ಸಿನಿಮಾ ನಿರ್ಮಾಣ ಮಾಡಿ, ಪ್ರಪಂಚದೆಲ್ಲೆಡೆ ಅದರ ಮಹತ್ವ ಸಾರಬೇಕೆಂದು ಯೋಚಿಸಿದ್ದೇನೆ. ಸಿನಿಮಾದಲ್ಲಿ ಕರಾವಳಿಗರನ್ನೇ ತರಬೇತಿ ನೀಡಿ ಅಭಿನಯಿಸಲು ಅವಕಾಶ ನೀಡುವ ಆಲೋಚನೆಯಲ್ಲಿದ್ದೇನೆ.