ಮಂಗಳೂರು :ಕೊರೊನಾ ಲಾಕ್ಡೌನ್ನಿಂದಾಗಿ ಎಲ್ಲಾ ರಂಗದ ಮಾರುಕಟ್ಟೆ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ರೆ, ಅಡಿಕೆ ಬೆಳೆಯ ಬೆಲೆ ಮಾತ್ರ ಏರುತ್ತಲೇ ಇದೆ. ಈ ಬೆಲೆ ಏರಿಕೆ ಇನ್ನೂ ಕೆಲವು ತಿಂಗಳು ಹೀಗೆ ಮುಂದುವರಿಯವ ಸೂಚನೆಯನ್ನು ತಜ್ಞರು ನೀಡಿದ್ದಾರೆ.
ದೇಶದೆಲ್ಲೆಡೆ ಕೊರೊನಾದಿಂದ ಲಾಕ್ಡೌನ್ ಜಾರಿಗೆ ಬಂದ ಸಂದರ್ಭದಲ್ಲಿ ಇಡೀ ಮಾರುಕಟ್ಟೆ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿತ್ತು. ಹಲವು ವ್ಯವಹಾರಗಳು ನಷ್ಟದಿಂದ ತಲೆ ಎತ್ತದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ, ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಬೆಳೆಯುವ ವಾಣಿಜ್ಯ ಬೆಳೆಯಾದ ಅಡಿಕೆ ಮಾರುಕಟ್ಟೆ ಮಾತ್ರ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಲೇ ಇತ್ತು. ಕೊರೊನಾ ಲಾಕ್ಡೌನ್ ಜಾರಿಯಾಗುವುದಕ್ಕೂ ಮೊದಲು ಕೆಜಿ 250ರ ಆಸುಪಾಸಿನಲ್ಲಿದ್ದ ಅಡಿಕೆ ಬೆಲೆ ಈಗ ₹330ಕ್ಕೆ ತಲುಪಿದೆ.
ದ.ಕ. ಜಿಲ್ಲೆಯ ಅಡಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಭಾರತೀಯ ಅಡಿಕೆ ಮಾರುಕಟ್ಟೆಗೆ ಹೆಚ್ಚಾಗಿ ಶ್ರೀಲಂಕಾ, ಬರ್ಮಾ ಮತ್ತು ನೇಪಾಳದಿಂದ ಶೇ.60ರಷ್ಟು ಅಡಿಕೆ ಆಮದಾಗುತ್ತಿತ್ತು. ಆ ದೇಶಗಳಲ್ಲಿ ಕಾಡುತ್ಪತ್ತಿಯಾಗಿರುವ ಅಡಿಕೆ ಹಾಗೂ ಕಾಳುಮೆಣಸು ಭಾರತದ ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಗೆ ಬರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಬೆಳೆಯುತ್ತಿದ್ದ ಅಡಿಕೆ ಬೆಲೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರುತ್ತಿತ್ತು. ಆದರೆ, ಲಾಕ್ಡೌನ್ ಘೋಷಣೆಯಾದ ಬಳಿಕ ಭಾರತಕ್ಕೆ ವಿದೇಶಗಳಿಂದ ಬರುತ್ತಿದ್ದ ಅಡಿಕೆ ಆಮದು ನಿಂತ ಪರಿಣಾಮ ದೇಶೀಯವಾಗಿ ಬೆಳೆದ ಅಡಿಕೆಗೆ ಹೆಚ್ಚಿನ ಬೇಡಿಕೆ ಬಂದಿದೆ.
ಈ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರತೀ ಬಾರಿಯೂ ಬೆಲೆ ಕುಸಿತದ ಭೀತಿಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಕೊರೊನಾ ಲಾಕ್ಡೌನ್ ಒಂದು ರೀತಿ ವರದಾನವಾಗಿ ಪರಿಣಮಿಸಿದೆ. ಬೆಳೆಗಾರ ಅಡಿಕೆಗೆ ಇನ್ನಷ್ಟು ಬೆಲೆ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ನೀಡಲು ಹಿಂದೇಟು ಹಾಕುತ್ತಿದ್ದಾನೆ. ಕೇವಲ ದೇಶೀಯ ಅಡಿಕೆಗಳೇ ಇದೀಗ ಮಾರಕಟ್ಟೆಯಲ್ಲಿ ಜಾಲ್ತಿಯಲ್ಲಿರುವುದರಿಂದ ಇನ್ನಷ್ಟು ತಿಂಗಳು ಇದೇ ರೀತಿಯ ಏರಿಕೆಯಾಗಲಿದೆ ಎನ್ನುವ ಲೆಕ್ಕಾಚಾರದಲ್ಲೂ ಅಡಿಕೆ ಬೆಳೆಗಾರರಿದ್ದಾರೆ.
ಕೇವಲ ತಮ್ಮ ಅವಶ್ಯಕತೆಗೆ ಅನುಗುಣವಾಗಿ ಅಡಿಕೆಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯತ್ಯಯವೂ ಆಗುವ ಲಕ್ಷಣ ಕಂಡು ಬರುತ್ತಿದೆ.