ಪುತ್ತೂರು(ದಕ್ಷಿಣ ಕನ್ನಡ): 2 ವರ್ಷದ ಹಿಂದೆ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್ ರೈ(28) ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಆರ್ಯಾಪು ಗ್ರಾಮದ ಚರಣ್ನನ್ನು ಹತ್ಯೆ ಮಾಡಲಾಗಿತ್ತು.
ಚರಣ್ ಕೊಲೆ ಬಗ್ಗೆ ಆತನ ಸ್ನೇಹಿತ ನವೀನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ಚರಣ್ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದರು. ಇದರ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ನವೀನ್, ತನ್ನ ಸ್ನೇಹಿತ ಚರಣ್ ಜೊತೆ ಆಗಾಗ ಪೆರ್ಲಂಪಾಡಿಗೆ ಬಂದು ಹೋಗುತ್ತಿದ್ದ. ಅದರಂತೆ ನಿನ್ನೆಯೂ ಕೂಡ ಸ್ನೇಹಿತರಿಬ್ಬರೂ ಮೆಡಿಕಲ್ ಶಾಪ್ ಕೆಲಸದಲ್ಲಿ ತೊಡಗಿದ್ದರು.
ಸಂಜೆ ಸುಮಾರು 04:15ರ ವೇಳೆಗೆ ಮೆಡಿಕಲ್ ಶಾಪ್ ಹೊರಗೆ ಕಾರಿನ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಚರಣ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಕೂಗಿದ್ದು, ಅಂಗಡಿಯೊಳಗಿದ್ದ ನವೀನ್ ಹೊರಗೆ ಬಂದಾಗ ಮೂವರು ಅಪರಿಚಿತರು ಮಾರಕಾಸ್ತ್ರಗಳಿಂದ ನೆಲದ ಮೇಲೆ ಬಿದ್ದಿದ್ದ ಚರಣ್ಗೆ ಹೊಡೆಯುತ್ತಿದ್ದರು. ತಡೆಯಲು ಮುಂದಾದಾಗ ಅಲ್ಲೇ ಇದ್ದ ನವೀನ್ ಪರಿಚಯಸ್ಥನೊಬ್ಬ ಹೋಗದಂತೆ ತಡೆದಿದ್ದಾನೆ.