ಕರ್ನಾಟಕ

karnataka

ETV Bharat / state

ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ಹತ್ಯೆ ಪ್ರಕರಣ: ಮೂವರು ಪೊಲೀಸ್​ ವಶಕ್ಕೆ?

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್ ರೈ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ.

By

Published : Jun 5, 2022, 3:33 PM IST

murder-accused-charan-raj-rai-murder-case
ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ಹತ್ಯೆ: ಮೂವರು ಪೊಲೀಸ್​ ವಶಕ್ಕೆ?

ಪುತ್ತೂರು(ದಕ್ಷಿಣ ಕನ್ನಡ): 2 ವರ್ಷದ ಹಿಂದೆ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್ ರೈ(28) ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಆರ್ಯಾಪು ಗ್ರಾಮದ ಚರಣ್​ನನ್ನು ಹತ್ಯೆ ಮಾಡಲಾಗಿತ್ತು.

ಚರಣ್ ಕೊಲೆ ಬಗ್ಗೆ ಆತನ ಸ್ನೇಹಿತ ನವೀನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ಚರಣ್ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದರು. ಇದರ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ನವೀನ್, ತನ್ನ ಸ್ನೇಹಿತ ಚರಣ್ ಜೊತೆ ಆಗಾಗ ಪೆರ್ಲಂಪಾಡಿಗೆ ಬಂದು ಹೋಗುತ್ತಿದ್ದ. ಅದರಂತೆ ನಿನ್ನೆಯೂ ಕೂಡ ಸ್ನೇಹಿತರಿಬ್ಬರೂ ಮೆಡಿಕಲ್ ಶಾಪ್​ ಕೆಲಸದಲ್ಲಿ ತೊಡಗಿದ್ದರು.

ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್ ರೈ ಹತ್ಯೆ.. ಮೂವರು ಆರೋಪಿಗಳ ಬಂಧನ?

ಸಂಜೆ ಸುಮಾರು 04:15ರ ವೇಳೆಗೆ ಮೆಡಿಕಲ್ ಶಾಪ್​ ಹೊರಗೆ ಕಾರಿನ ಬಳಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಚರಣ್​ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಕೂಗಿದ್ದು, ಅಂಗಡಿಯೊಳಗಿದ್ದ ನವೀನ್ ಹೊರಗೆ ಬಂದಾಗ ಮೂವರು ಅಪರಿಚಿತರು ಮಾರಕಾಸ್ತ್ರಗಳಿಂದ​​ ನೆಲದ ಮೇಲೆ ಬಿದ್ದಿದ್ದ ಚರಣ್​ಗೆ ಹೊಡೆಯುತ್ತಿದ್ದರು. ತಡೆಯಲು ಮುಂದಾದಾಗ ಅಲ್ಲೇ ಇದ್ದ ನವೀನ್​​ ​ಪರಿಚಯಸ್ಥನೊಬ್ಬ ಹೋಗದಂತೆ ತಡೆದಿದ್ದಾನೆ.

ಇದನ್ನೂ ಓದಿ:ಸುಳ್ಯದ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿ ಬರ್ಬರ ಹತ್ಯೆ

ಆಗ ದುಷ್ಕರ್ಮಿಗಳು ಹಲ್ಲೆ ನಡೆಸಿ ನವೀನ್​ಗೆ ತುಳುಭಾಷೆಯಲ್ಲಿ 'ಅಂದಿನ ವಿಷಯ ಗೊತ್ತಲ್ವಾ, ಮತ್ತೆ ನಾವು ಇವನನ್ನು ಬಿಡುತ್ತೀವಾ' ಅಂತಾ ಹೇಳಿ ಬಂದ ಬೈಕ್​ನಲ್ಲೇ ​ಅಂಚಿನಡ್ಕದ ಕಡೆಗೆ ತೆರಳಿದ್ದಾರೆ. ಆರೋಪಿಗಳು ತಲ್ವಾರ್​​​ ಹಾಗೂ ರಾಡ್​ನಿಂದ ಹಲ್ಲೆ ಮಾಡಿದ ಪರಿಣಾಮ ಚರಣ್ ರಾಜ್​​ ಕುತ್ತಿಗೆ, ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2 ವರ್ಷದ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಗಣೇಶೋತ್ಸವ ಪೆಂಡಲ್​ನೊಳಗೆ ಕೊಲೆ ಮಾಡಿದ ಪ್ರಕರಣದಲ್ಲಿ ಚರಣ್ ರಾಜ್ ಆರೋಪಿಯಾಗಿದ್ದಾನೆ. ಇದೇ ದ್ವೇಷದಿಂದ ಕಾರ್ತಿಕ್​ನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿರುವ ಶಂಕೆಯಿದೆ. ಈ ಬಗ್ಗೆ ನವೀನ್ ನೀಡಿದ​ ದೂರಿನಂತೆ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

ABOUT THE AUTHOR

...view details