ಚಿಕ್ಕಮಗಳೂರು :ಸಚಿವ ಆರ್.ಅಶೋಕ್ ಪಿಎ ಎನ್ನಲಾದ ಗಂಗಾಧರ್ ಎಂಬುವರು ಲಂಚ ಕೇಳಿರುವ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಪ್ರತಿಕ್ರಿಯೆ.. ಜನವರಿ 20ರಂದು ವಾಟ್ಸ್ಆ್ಯಪ್ ಮೂಲಕ ಒಂದು ಕರೆ ಬಂದಿತ್ತು. 24ನೇ ತಾರೀಖು ಸಚಿವರು ಬರ್ತಾರೆ ಭೇಟಿಯಾಗಿ ಎಂದರು. ನಂತರ 24ನೇ ತಾರೀಖು ಬೆಳಗ್ಗೆ 10.30ಕ್ಕೆ ಕರೆ ಮಾಡಿ ಸಂಜೆ ಸಿಗಲು ಹೇಳಿದ್ರು. ನಾನು ಸಂಜೆ 6ಗಂಟೆಗೆ ಶೃಂಗೇರಿಯ ಆದಿಚುಂಚನಗಿರಿ ಸಭಾಭವನಕ್ಕೆ ಹೋದೆ. ಅವರು 7.30ಕ್ಕೆ ಬಂದರು.
ಅಲ್ಲೇ ಇದ್ದ ರೂಮಿಗೆ ನಾವು ಹೋದೆವು. ನನಗೆ ಫೋನ್ ಮಾಡಿದವರು ಯಾರೆಂದು ಗೊತ್ತಿರಲಿಲ್ಲ. ನಾನು ಮೊದಲೇ ಪೊಲೀಸರಿಗೆ ಅವರನ್ನ ತೋರಿಸಲು ಕೇಳಿದ್ದೆ. ಪೊಲೀಸರು ಇವರೇ ಕಂದಾಯ ಸಚಿವರ ಪಿಎ ಎಂದು ಹೇಳಿದರು. ಪಕ್ಕದ ರೂಮಿಗೆ ಹೋದ ಕೂಡಲೇ ಏನಿದೆ ಕೊಡಿ ಎಂದು ಕೇಳಿದರು.
ನಾನು ನೇರವಾಗಿ ಹೇಳಿದೆ. ನಾನು ಕೊಡೋದಿಲ್ಲ, ತೆಗೆದುಕೊಳ್ಳುವುದೂ ಇಲ್ಲ ಎಂದು ನೇರವಾಗಿ ಹೇಳಿದೆ. ಆ ಮೇಲೆ ಆಯ್ತು ಹೋಗಿ ಎಂದರು. ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ರು. ಕರ್ನಾಟಕ ಸೆಕ್ರೆಟರಿಗೆ ಕಂಪ್ಲೇಂಟ್ ಮಾಡಿದ್ದೇನೆ. ಈ ಲೆಟರ್ ಸಚಿವರಿಗೆ ಕೊಡಿ ಎಂದೆ.
ಅದನ್ನ ನೀವೇ ಅವರಿಗೆ ಕೊಡಿ ಎಂದು ಹೇಳಿ ಹೋದರು. ನಿನ್ನೆ ರಾತ್ರಿ ನನಗೇ ವಾಟ್ಸ್ಆ್ಯಪ್ ಕಾಲ್ ಬಂದಿತ್ತು. ನಾನು ನೋಡಿರಲಿಲ್ಲ. ಇವತ್ತು ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ. ಫೈಲ್ ಕೊಡಲಿಲ್ಲ ಎಂದರು. ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರೂ ನಾನು ಕೊಡಲಿಲ್ಲ ಎಂದೆ.
ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಹಾಗೂ ಆರ್.ಅಶೋಕ್ ಪಿಎ ಗಂಗಾಧರ್ ದೂರವಾಣಿ ಮಾತುಕತೆ.. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 24ರಂದು ಗಂಗಾಧರ್ ವಿರುದ್ಧ ಚೆಲುವರಾಜ್ ದೂರು ದಾಖಲಿಸಿದ್ದಾರೆ. ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದು, ತನಗೂ ಸೂಕ್ತ ರಕ್ಷಣೆ ನೀಡುವಂತೆ ಚೆಲುವರಾಜ್ ಮನವಿ ಮಾಡಿದ್ದಾರೆ.