ಚಿಕ್ಕಮಗಳೂರು : ಎರಡು ಹಂತದಲ್ಲಿ ನಡೆಯಬೇಕಿದ್ದ ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ದತ್ತ ಜಯಂತಿಯ ಅಂಗವಾಗಿ ಒಂದೇ ಹಂತದಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಆಯೋಗ ದಿನಾಂಕ ನಿಗದಿ ಮಾಡಿತ್ತು. ಡಿಸೆಂಬರ್ 22 ರಂದು ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಮಾತ್ರ ಗ್ರಾ.ಪಂ.ಚುನಾವಣೆ ನಡೆಯಬೇಕಿತ್ತು. ತಾರೀಖು 27 ರಂದು ಕಡೂರು, ತರೀಕೆರೆ, ಎನ್.ಆರ್.ಪುರ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ 2ನೇ ಹಂತದ ಚುನಾವಣೆ ನಡೆಯಬೇಕಿತ್ತು.
ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಡಿಸೆಂಬರ್ 27 ರಿಂದ 29 ರ ವರೆಗೆ ದತ್ತ ಜಯಂತಿ ಅಭಿಯಾನ ನಡೆಯಲಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಒಂದೇ ಹಂತದಲ್ಲಿ ಚುನಾವಣೆ ನಡೆಸಿದರೆ ಸೂಕ್ತ ಎಂದು ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಸೂಕ್ಷ್ಮ ಜಿಲ್ಲೆಯಾಗಿದ್ದು ಕಾನೂನು ಪಾಲನೆಗೆ ಪೊಲೀಸ್ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಸೇವೆಯೂ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ಎರಡು ಹಂತದಲ್ಲಿ ಮಾಡಿದ್ದಲ್ಲಿ ಬಂದೋಬಸ್ತ್ ಮಾಡಲು ಕಷ್ಟ ಸಾಧ್ಯವಾಗುತ್ತದೆ ಎಂದು ವಿವರಿಸಿದ್ದರು.