ಚಿಕ್ಕಮಗಳೂರು:ಅಮೃತ್ ಮಹಲ್ ತಳಿಯ ರಾಸುಗಳಿಗೆ ಬ್ರಿಟಿಷರೇ ಮನಸೋತಿದ್ದರು. 18 ಗಂಟೆ ದುಡಿದರೂ ಸುಸ್ತಾಗದ ಇವುಗಳ ಅಭಿವೃದ್ಧಿಗೆ ಮಹಾರಾಜರೇ ಮೆಚ್ಚಿದ್ದರು. ಕೃಷ್ಣದೇವರಾಯನ ಕಾಲದಿಂದ ಟಿಪ್ಪು ಸುಲ್ತಾನ್ ಕಾಲದವರೆಗೂ ವಿಶೇಷವಾದ ತಳಿ ಈ ಅಮೃತ್ ಮಹಲ್ ತಳಿ. ಒಂದು ಹಸು ಗರಿಷ್ಠ ಒಂದೂವರೆ ಲಕ್ಷಕ್ಕೂ ಮಾರಾಟವಾಗಿದ್ದವು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಂತತಿಯೇ ಕಣ್ಮರೆಯಾಗುವ ಅಂಚಿನಲ್ಲಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಸುಗಳು ಬಲಿಯಾಗುತ್ತವೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರದ ಅಮೃತ್ ಮಹಲ್ ತಳಿಯ ರಾಸುಗಳು ರಾಜ್ಯದಲ್ಲಿಯೇ ವಿಶೇಷವಾದ ತಳಿ. ವಿಜಯನಗರದ ಅರಸರ ಕಾಲದಲ್ಲಿ ಈ ಸಂತತಿಯ ರಕ್ಷಣೆಗೆ 4 ಲಕ್ಷ ಎಕರೆ ಅಧಿಕ ಜಮೀನನ್ನು ಮೀಸಲಾಗಿ ಇಡಲಾತ್ತು. ಆದರೇ ಇಂದು ಅದರಲ್ಲಿ ಉಳಿದಿರುವುದು 70 - 80 ಸಾವಿರ ಎಕರೆಯಷ್ಟೆ. ಜಿಲ್ಲೆಯಲ್ಲಿ ಅಜ್ಜಂಪುರ, ಲಿಂಗದಹಳ್ಳಿ, ಬಾಸೂರು, ಬೀರೂರಿನಲ್ಲಿ ತಳಿ ಸಂವರ್ಧನಾ ಕೇಂದ್ರಗಳಿವೆ.
ಕಡೂರು ತಾಲೂಕಿನ ಬಾಸೂರಿನಲ್ಲಿ 3,500 ಎಕರೆ ಪ್ರದೇಶದಲ್ಲಿ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರವಿದೆ. ಇಲ್ಲಿನ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಾಸುಗಳು ತಿನ್ನೋಕು ಮೇವಿಲ್ಲದೆ ಸರದಿ ಸಾಲಲ್ಲಿ ಸಾವನ್ನಪ್ಪುತ್ತಿವೆ ಎಂಬ ಆರೋಪ ಕೇಳಿಬಂದಿವೆ.
ಸಾವಿರಾರು ವರ್ಷಗಳಿಂದ ಶ್ರೇಷ್ಠ ತಳಿ ಎಂದೇ ಖ್ಯಾತಿಯಾತಿರೋ ರಾಸುಗಳು ಮೇವಿಲ್ಲದೆ ಹಸಿವಿನಿಂದ ಪ್ರಾಣ ಬಿಡುತ್ತಿರೋದು ನಿಜಕ್ಕೂ ದುರಂತ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಎರಡು ತಿಂಗಳಲ್ಲಿ 3 ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ.
ಸರ್ಕಾರದಿಂದ ಪ್ರತಿವರ್ಷ ಈ ಹಸುಗಳ ರಕ್ಷಣೆಗಾಗಿ ಮತ್ತು ಮೇವಿಗಾಗಿ ಕೋಟ್ಯಂತರ ರೂಪಾಯಿ ಹಣ ಬರುತ್ತದೆ. ಮಳೆಗಾಲದಲ್ಲಿ ಮೇವಿಗೆ ಅಗತ್ಯವಿರೋ ಮೆಕ್ಕೆಜೋಳ, ಹುಲ್ಲು ಬೆಳೆಯಬೇಕು. ಆದರೆ ರಾಸುಗಳು ಹೀಗೆ ಸಾಯುತ್ತಿರೋದನ್ನ ಗಮನಿಸಿದರೇ ಬಂದ ಹಣ ಎಲ್ಲಿ ಹೋಗುತ್ತಿದೆ ಎಂಬ ಅನುಮಾನ ಸಾರ್ವಜನಿಕರದ್ದಾಗಿದೆ. ಕಾವಲ್ನಲ್ಲಿ ಬೆಳೆದ ಹುಲ್ಲು ಕೊಯ್ಯದೆ ಹಾಗೇ ಗೊಬ್ಬರವಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲ್ಗಳಿವೆ. ಇದರಲ್ಲಿ ಬಾಸೂರಿನ ಘಟಕವೂ ಒಂದು. ಎರಡೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ರಾಸುಗಳ ಸಂಖ್ಯೆ ಇಂದು 390 ಕ್ಕೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇವಿಲ್ಲದೇ ದಷ್ಟ-ಪುಷ್ಟವಾಗಿದ್ದ ಗೋವುಗಳು ಇಂದು ಬಡಕಲಾಗಿವೆ.
ಒಟ್ಟಾರೆಯಾಗಿ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಈ ಅಪರೂಪದ ರಾಸುಗಳು ಅವನತಿಯ ಅಂಚಿನಲ್ಲಿವೆ. ಸರ್ಕಾರ ಈ ಮೂಕಪ್ರಾಣಿಗಳ ಹೊಟ್ಟೆಗಾದರೂ ಮೇವು ಹಾಕಲಿ, ಹಸಿವಿನಿಂದ ಸಾಯದಂತೆ ಈ ಹಸುಗಳ ಪಾಲನೆ, ಪೋಷಣೆ ಮಾಡಿದರೇ ಅಷ್ಟೇ ಸಾಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.