ಚಿಕ್ಕಮಗಳೂರು:ವಿವಾಹಿತ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತಿ ಅಭಿಷೇಕ್ ಜೊತೆಯಲ್ಲಿ ರಾತ್ರಿಯಿಡೀ ಕಾಡಿನಲ್ಲಿದ್ದ ಸುಮಾ ಎಂಬಾಕೆ ಸಾವನ್ನಪ್ಪಿದ್ದಾಳೆ. ಈ ವಿಚಾರವನ್ನು ಸ್ವತಃ ಅಭಿಷೇಕ್ ಎಲ್ಲರಿಗೂ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಸುಮಾ ಮತ್ತು ಅಭಿಷೇಕ್ ಒಂದು ವರ್ಷದ ಹಿಂದೆ ಪ್ರೀತಿಸಿ, ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
ಕಾರ್ಯಕ್ರಮವೊಂದನ್ನು ಮುಗಿಸಿ ವಾಪಸಾಗುವ ವೇಳೆ ಈ ಜೋಡಿ ಕಾಡಿಗೆ ತೆರಳಿದ್ದು ಯಾಕೆ?, ಮಹಿಳೆ ಸಾವನ್ನಪ್ಪಲು ಕಾರಣವೇನು? ಎಂಬ ಬಗ್ಗೆ ಸಂದೇಹಗಳು ಉದ್ಭವಿಸಿವೆ. ರಾತ್ರಿಯ ವೇಳೆ ಪತ್ನಿಯ ಮೃತದೇಹದೊಂದಿಗೆ ಪತಿ ಅಭಿಷೇಕ್ ಕಾಡಿನಲ್ಲಿಯೇ ಕಳೆದಿದ್ದಾನೆ ಎನ್ನಲಾಗಿದೆ.