ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹರಿಯುವ ಭದ್ರಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ್ನು ಛಾಯಾಗ್ರಾಹಕನೋರ್ವ ನೀರಿಗಿಳಿದು ರಕ್ಷಣೆ ಮಾಡಿದ್ದಾನೆ.
ಈಜು ಬಾರದಿದ್ರು ಭದ್ರಾ ನದಿಗೆ ಹಾರಿ ಬಾಲಕನ ರಕ್ಷಿಸಿದ ಫೋಟೋಗ್ರಾಫರ್!
ಕಳಸ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಬಾಲಕನೋರ್ವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಕಂಡ ಛಾಯಾಗ್ರಾಹಕನೋರ್ವ ತನಗೆ ಈಜು ಬಾರದಿದ್ದರೂ ಸಹ ನೀರಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹರಿಯುವ ಭದ್ರಾ ನದಿಯ ಅಂಬುತೀರ್ಥದ ಬಳಿ ಈ ಘಟನೆ ನಡೆದಿದೆ. ಭಾನುವಾರದಂದು ಮದುವೆಯ ಪ್ರೀ ವೆಡ್ಡಿಂಗ್ ಶೂಟ್ಗಾಗಿ ಕಳಸಕ್ಕೆ ಬೆಂಗಳೂರಿನ ಮೂಲದವರು ಬಂದು ಪೋಟೋ ಸೆರೆ ಹಿಡಿಯುತ್ತಿದ್ದರು. ಪೋಷಕರ ಜೊತೆಯಲ್ಲಿಯೇ ಬಂದಿದ್ದ ಮಗುವೊಂದು ಪೋಷಕರ ಗಮನಕ್ಕೆ ಬಾರದ ಹಾಗೆ ಭದ್ರಾ ನದಿಯಲ್ಲಿ ಇಳಿದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.
ಇದನ್ನು ನೋಡಿದ ಛಾಯಾಗ್ರಾಹಕ, ಮಗುವಿನ ರಕ್ಷಣೆಗೆ ಧಾವಿಸಿ ನೀರಿಗೆ ಹಾರಿದ್ದಾನೆ. ಆದರೆ ಪೋಟೋಗ್ರಾಫರ್ಗೆ ಕೂಡ ಈಜು ಬಾರದ್ದರಿಂದ ಆತನು ಸಹ ಕೊಚ್ಚಿ ಹೋಗಿದ್ದ. ನಂತರ ಹೇಗೋ ಹರಸಾಹಸಪಟ್ಟು ಮಗುವನ್ನು ಹಿಡಿದು ನದಿಯ ಮಧ್ಯದಲ್ಲಿದ್ದ ಬಂಡೆ ಹಿಡಿದು ನಿಂತಿದ್ದಾನೆ. ನಂತರ ಸಹಾಯಕ್ಕಾಗಿ ಫೋಟೋಗ್ರಾಫರ್ ಕೂಗಿದ್ದು, ಕೂಡಲೇ ಅಲ್ಲಿದ್ದವರು ಕ್ಯಾಮರಾ ಟ್ರೈಪಾಡ್ ಹಾಗೂ ಮರದ ಕೋಲುಗಳನ್ನು ನೀಡಿ ಮಗು ಹಾಗೂ ಫೋಟೋಗ್ರಾಫರ್ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.