ಚಿಕ್ಕಬಳ್ಳಾಪುರ: ಒಂದು ವರ್ಷದ ಹಿಂದಷ್ಟೇ ನಾಯಿಗಳ ದಾಳಿಯಿಂದ ಬಾಲಕನೋರ್ವ ಮೃತಪಟ್ಟಿದ್ದ. ಇದೀಗ ಆತನ ತಮ್ಮನ ಮೇಲೂ ಅವುಗಳು ಅಟ್ಯಾಕ್ ಮಾಡಿವೆ. ಈ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಇಲ್ಲಿನ ತೈಬಾ ನಗರದ ನಿವಾಸಿ ಶಬೀರ್ ಹಾಗೂ ಸಲ್ಮಾ ದಂಪತಿಯ ಮಗ ದಸ್ತಗಿರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಂಜೆ ಶಾಲೆ ಮುಗಿದ ಬಳಿಕ ಆಟವಾಡಲು ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ಮೈಮೇಲೆ ಎರಗಿವೆ. ನಾಯಿಗಳ ದಂಡು ಬಾಲಕನ ಮೂಗು, ಬಾಯಿ ಕಚ್ಚಿದ್ದು ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಗಮನಿಸಿದ ತಾಯಿ ಸಲ್ಮಾ ಹಾಗೂ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಸದ್ಯ ಬಾಲಕನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.