ಕರ್ನಾಟಕ

karnataka

ETV Bharat / state

ನಾವು ಎನ್ನುವ ಬದಲು ನಾನು ಎಂದದ್ದೇ ಸೋಲಿಗೆ ಕಾರಣ: ಹಿರಿಯರ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅದಕ್ಕೂ ಮುನ್ನ ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧವೂ ಗುಡುಗಿದರು.

By ETV Bharat Karnataka Team

Published : Jan 6, 2024, 4:47 PM IST

Updated : Jan 6, 2024, 5:19 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಚಾಮರಾಜನಗರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಹಿರಿಯ ನಾಯಕರು ನಾನು, ನಾನು ಎಂದದ್ದೇ ಕಾರಣವಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಚಾಮರಾಜನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.

ಹಿರಿಯ ನಾಯಕರು ಚುನಾವಣೆಗೆ ಮುನ್ನ ನಾವು ಎನ್ನುತ್ತಾರೆ, ಚುನಾವಣೆ ಗೆದ್ದ ಬಳಿಕ ನಾನು, ನಾನು ಎನ್ನುತ್ತಾರೆ. ಅದನ್ನು ಬಿಟ್ಟು, ನಾವೆಲ್ಲರೂ ಒಂದೇ ಎಂದು ತಿಳಿದುಕೊಂಡಿದ್ದರೇ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಗೆ ಸೋಲಿಗೆ ಬಿಜೆಪಿ ಕಾರಣವಲ್ಲ, ಕಾರ್ಯಕರ್ತರು ಕಾರಣವಲ್ಲ, ನಾಯಕರು ಕಾರಣ ಎಂದು ಗುಡುಗಿದ್ದಾರೆ.

ಬಿ.ವೈ.ವಿಜಯೇಂದ್ರ ಭರ್ಜರಿ ರೋಡ್ ಶೋ

ರಾಜ್ಯ ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಬಿಎಸ್​ವೈ ನನಗೆ ಒಂದು ಮಾತು ಹೇಳಿದ್ದಾರೆ. ರಾಜ್ಯದಲ್ಲಿ ಅನೇಕ ಹಿರಿಯ ನಾಯಕರು ಇದ್ದರೂ ಪಕ್ಷ ನಿನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ, ಒಂದು ದಿನವೂ ನೀನು ಮನೆಯಲ್ಲಿ ಕೂರಬಾರದು. ಲೋಕಭೆಯಲ್ಲಿ 28 ಕ್ಷೇತ್ರವನ್ನೂ ಗೆಲ್ಲಬೇಕು ಎಂದಿದ್ದಾರೆ. ಅವರೂ ಕೂಡ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಮನಮೋಹನ್ ಸಿಂಗ್ ಆಡಳಿತ ಇದ್ದಾಗ ಭ್ರಷ್ಟಾಚಾರ ನಡೆಯುತ್ತಿತ್ತು. ಇದೀಗ ದೇಶದ ಆಡಳಿತದಲ್ಲಿ ಭ್ರಷ್ಟಾಚಾರದ ಒಂದೂ ಆರೋಪವೂ ಇಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗುವುದನ್ನು ಯಾವ ದುಷ್ಟ ಶಕ್ತಿಯು ತಡೆಯುವುದಕ್ಕೆ ಆಗಲ್ಲ. ಕಾಂಗ್ರೆಸ್​ಗೂ ಇದು ಮನದಟ್ಟಾಗಿದ್ದು ಹತಾಶೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ವೈ.ವಿಜಯೇಂದ್ರ

ಚುನಾವಣೆ ಬಂದ್ರೆ ಕಾಂಗ್ರೆಸ್​​ನವರು ಅಂಬೇಡ್ಕರ್ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಆದ್ರೆ ಚುನಾವಣೆ ವೇಳೆ ಅಂಬೇಡ್ಕರ್ ಹೆಸರು ಬೇಕು. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದಾಗ ಕಲಾಪ ನಡೆಯುತ್ತಿತ್ತು. ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿದ್ದರೂ ಮಹಿಳೆ ಭೇಟಿ ಮಾಡಲಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಮಗ ವಿಜಯೇಂದ್ರ ಅಧ್ಯಕ್ಷನಾದ ಬಳಿಕ ಕಾಂಗ್ರೆಸ್​​ನವರಿಗೆ ಭಯ ಶುರುವಾಗಿದೆ. 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲ್ಲಿದ್ದು ಮುಂಬುರುವ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಟಿ ನಡೆಸಿ ವಾಗ್ದಾಳಿ: ವೇದಿಕೆ ಕಾರ್ಯಕ್ರಮದ ಬಳಿಕ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆದಿದೆ. ಒಬ್ಬ ಅನುಭವಿ ಮುಖ್ಯಮಂತ್ರಿ 14 ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾರೆ. ರಾಜ್ಯದ ಸಾಕಷ್ಟು ನೀರಿಕ್ಷೆ ಇತ್ತು. ನಿರೀಕ್ಷೆಗಳು ಹುಸಿಯಾಗಿವೆ. ನಾವುಗಳು ಮೋಸ ಹೋಗಿದ್ದೇವೆ ಎಂಬ ಭಾವನೆ ಜನರಲ್ಲಿದೆ ಎಂದರು.

ಬೃಹತ್ ಸೇಬಿನ ಹಾರದ ಮೂಲಕ ಅದ್ಧೂರಿ ಸ್ವಾಗತ

ಗ್ಯಾರೆಂಟಿಗಳನ್ನ ಅರೆಬರೆ ಘೋಷಣೆ ಮಾಡಿದ್ದು ಎಷ್ಟು ಜನರಿಗೆ ತಲುಪಿದೆಯೋ ಗೊತ್ತಿಲ್ಲ. ಸರ್ಕಾರದ ನಡವಳಿಕೆಯಿಂದ ರೈತರು ಹತಾಶರಾಗಿದ್ದಾರೆ. ಎಸ್ಸಿಪಿ ಟಿಪಿಎಸ್ಪಿ ಹಣವನ್ನ ಬೇರೆಡೆಗೆ ವರ್ಗ ಮಾಡಿಕೊಂಡಿದೆ. ಸಿದ್ದರಾಮಯ್ಯ ಅವರ ಸರ್ಕಾರ ದಲಿತ ಸಮಾಜಗಳಿಗೆ ಅನ್ಯಾಯ ಮಾಡುತ್ತಿದೆ. ಹೊಸ ಯೋಜನೆ ಜಾರಿ ತರುತ್ತಿಲ್ಲ. ಯಾವೊಬ್ಬ ಶಾಸಕನು ಕೂಡ ಸ್ವಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗಿಲ್ಲ. ರಸ್ತೆ ಅಭಿವೃದ್ಧಿಯಾಗುತ್ತಿಲ್ಲ. ಆಸ್ಪತ್ರೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಾಲದೆಂಬಂತೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದುಷ್ಟ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ. ವಿಧಾನಸಭಾ ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿದೆ. ಸಂಪೂರ್ಣ ಶ್ರಮ ಹಾಕಬೇಕಿತ್ತು. ಅದು ಕೊರತೆಯಾಯ್ತು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸೋಮಣ್ಣ, ಯತ್ನಾಳ್ ಅವರ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವುದಿಲ್ಲ. ಸಾಕಷ್ಟು ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಸೋಮಣ್ಣ ಅವರ ಚುನಾವಣೆ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸೋಮಣ್ಣ ಹಿರಿಯರು ಅವರ ಕೊಡುಗೆ ಪಕ್ಷಕ್ಕೆ ಇದೆ. ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ, ಸೋಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣ ಇದೆ. ಸೋಮಣ್ಣ ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಮಾಡುತ್ತೇನೆ ಎಂದರು.

ಬೃಹತ್ ಹೂವಿನ ಹಾರದ ಮೂಲಕ ಅದ್ಧೂರಿ ಸ್ವಾಗತ

ಭರ್ಜರಿ ರೋಡ್ ಶೋ: ರಾಜ್ಯಾಧ್ಯಕ್ಷರಾದ ಬಳಿಕ ಚಾಮರಾಜನಗರಕ್ಕೆ ಇದೇ ಮೊದಲ ಬಾರಿಗೆ ಬಿ ವೈ ವಿಜಯೇಂದ್ರ ಭೇಟಿ ನೀಡಿದ್ದು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಸಂತೇಮರಹಳ್ಳಿ ವೃತ್ತಕ್ಕೆ ವಿಜಯೇಂದ್ರ ಆಗಮಿಸಿದ ವೇಳೆ ಬೃಹತ್ ಹೂವಿನ ಹಾಗೂ ಸೇಬಿನ ಹಾರವನ್ನು ಹಾಕಲಾಯಿತು. ಬಳಿಕ, ಮಹರ್ಷಿ ವಾಲ್ಮೀಕಿ ಮತ್ತು ಪ್ರಭು ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಬಿವೈವಿ ಪುಷ್ಪಾರ್ಚನೆ ಸಲ್ಲಿಸಿದರು. ವೃತ್ತದಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಭುವನೇಶ್ವರಿ ವೃತ್ತದಲ್ಲೂ ವಿಜಯೇಂದ್ರಗೆ ಕೇಸರಿ ಮಳೆ ಸುರಿಸಿದ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿದರು. ಹಳೇ ಮೈಸೂರು ಭಾಗದಲ್ಲಿ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಅಪಾರ ಅಭಿಮಾನಿ ಬಳಗವಿದ್ದು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ವಿಜಯೇಂದ್ರ ಅವರ ಈ ಭೇಟಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಫ್ಲೆಕ್ಸ್ ಪಾಲಿಟಿಕ್ಸ್: ರಾಜ್ಯಾಧ್ಯಕ್ಷರ ಆಗಮನಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಅಳವಡಿಸಿದ್ದ ಬಿ ವೈ‌ ವಿಜಯೇಂದ್ರ ಮತ್ತು ಕಮಲ ಚಿಹ್ನೆ ಬ್ಯಾನರ್​​ಗಳನ್ನು ನಗರಸಭೆ ತೆರವುಗೊಳಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

Last Updated : Jan 6, 2024, 5:19 PM IST

ABOUT THE AUTHOR

...view details