ಚಾಮರಾಜನಗರ: ಕೊರೊನಾ ಸಂಕಷ್ಟ ಕಾಲದಲ್ಲಿ ಬಡವರ, ಶ್ರಮಿಕರು ಹಣ ಇಲ್ಲದೇ ಒದ್ದಾಡುತ್ತಿದ್ದಾರೆ. ಆದರೆ, ಅಂಬಾನಿ ಆಸ್ತಿ 15 ಪಟ್ಟು ಹೆಚ್ಚಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದು ಭಾರತದಲ್ಲಿ ನಕಲಿ ಪ್ರಜಾಪ್ರಭುತ್ವ ತಾಂಡವ ಆಡುತ್ತಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬುದು ಬದಲಾಗಿ ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರದ ಆಡಳಿತ ಎಂಬಂತಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಬಡವರ, ಶ್ರಮಿಕರು ಹಣ ಇಲ್ಲದೇ ಒದ್ದಾಡುತ್ತಿದ್ದಾರೆ. ಆದರೆ, ಅಂಬಾನಿ ಆಸ್ತಿ 15 ಪಟ್ಟು ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಜಾತಿ ಭೂತವಾಗಿ ಕಾಡುತ್ತಿದೆ
ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ರಾಜಕೀಯ ಸಮಾನತೆ ತಂದುಕೊಟ್ಟವರು. ಆದರೆ, ಇಂದು ನಮಗೆ ಅಂಬೇಡ್ಕರ್ ಬೇಕಾಗಿಲ್ಲ ಅವರ ಜಾತಿ ಬೇಕಾಗಿದೆ, ಬಸವಣ್ಣ ಬೇಕಾಗಿಲ್ಲ ಅವರ ಜಾತಿ ಬೇಕಾಗಿದೆ, ಕುವೆಂಪು ಬೇಕಾಗಿಲ್ಲ ಅವರ ಜಾತಿ ಬೇಕಾಗಿದೆ, ಸತ್ತ ವ್ಯಕ್ತಿಗೂ ಜಾತಿ ನಂಟು ಬಿದದೇ ಜಾತಿವಾರು ಸ್ಮಶಾನಗಳಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮತಯಂತ್ರಗಳಲ್ಲಿ ಪ್ರಜೆಗಳನ್ನೇ ಪ್ರಭುಗಳನ್ನಾಗಿಸಿದರು
ರಾಣಿ ಹೊಟ್ಟೆಯಲ್ಲಿ ಹುಟ್ಟುತ್ತಿದ್ದ ರಾಜನನ್ನು ಕಿತ್ತುಹಾಕಿ ಮತಯಂತ್ರಗಳಲ್ಲಿ ಪ್ರಜೆಗಳನ್ನೇ ಪ್ರಭುಗಳನ್ನಾಗಿಸಿದರು. ಮಹಿಳೆಯರನ್ನು ಸಂಕೋಲೆಯಿಂದ ಬಿಡುಗಡೆಗೊಳಿಸಿದರು. ಭಾರತದ ಅಡಿಪಾಯ ಸಂವಿಧಾನವಾಗಿದ್ದು ಸಂವಿಧಾನವು ಅಲುಗಾಡಿಸಲು ಹೋದರೇ ಅಖಂಡ ಭಾರತವೇ ನಾಶವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮತ ನಮ್ಮ ಹೆಣ್ಣು ಮಕ್ಕಳಂತೆ ಆದ್ದರಿಂದ ಸೂಕ್ತ ವರನಿಗೆ ಕೊಟ್ಟು ಮದುವೆ ಮಾಡಿದಂತೆ ಪ್ರಮಾಣಿಕರನ್ನು ಗೆಲ್ಲಿಸಿ ಪ್ರಜಾಪ್ರಭುತ್ವ ಕಾಪಾಡಬೇಕಿದೆ, ಇನ್ನಾದರೂ ಬಡವರು, ಶ್ರಮಿಕರು ಮತದ ಕಿಮ್ಮತ್ತು ಅರಿಯಬೇಕು ಎಂದು ಕರೆ ನೀಡಿದರು.