ಬೀದರ್: ಅಕ್ರಮ ಕಸಾಯಿಖಾನೆ ಮಾಫಿಯಾ ದುಷ್ಕರ್ಮಿಗಳು ಕೇಂದ್ರ ಟೆಲಿಕಾಂ ಸಲಹಾ ಸಮಿತಿ ಸದಸ್ಯ ಮಲ್ಲೇಶ್ ಗಣಪೂರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕಸಾಯಿಖಾನೆ ಮಾಫಿಯಾದಿಂದ ಹಲ್ಲೆ.. ನಗರದ ರೈಲ್ವೆ ಸ್ಟೇಷನ್ ಬಳಿಯ ಹೋಟೆಲ್ವೊಂದರಲ್ಲಿ ಕುಳಿತಿದ್ದ ಮಲ್ಲೇಶ್ ಗಣಪೂರ್ ಅವರ ಮೇಲೆ ಕಸಾಯಿಖಾನೆ ದಂಧೆಕೋರರ ಗ್ಯಾಂಗ್ ಸಾಮೂಹಿಕವಾಗಿ ಹಲ್ಲೆ ಮಾಡಿದ್ದಾರೆ. ಹಾಡಹಗಲೆ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿದ್ದಾಗ ಮಲ್ಲೇಶ್ ಗಣಪೂರ್ ಅವರು ಜಿಲ್ಲೆಯ ವಿವಿಧ ಭಾಗದಲ್ಲಿ ಅಕ್ರಮ ಕಸಾಯಿಖಾನೆ ಹಾಗೂ ಅಕ್ರಮ ಜಾನುವಾರು ಸಾಗಾಟ ಅಡ್ಡೆ ಮೇಲೆ ದಾಳಿ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದರು. ಈ ಹಳೆ ದ್ವೇಷವನ್ನ ಇಟ್ಟುಕೊಂಡ ಗ್ಯಾಂಗ್ ಮಲ್ಲೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮಲ್ಲೇಶ್ ಗಣಪೂರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.