ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ನೆಲ್ಲುಡಿ ಕೊಟಾಲ್ನಲ್ಲಿರುವ ಎಟಿಎಂ ಮಷಿನ್ನಲ್ಲಿರುವ ಸುಮಾರು 9.36 ಲಕ್ಷ ರೂ.ಗಳ ಮೊತ್ತದ ಹಣವನ್ನ ದರೋಡೆ ಮಾಡಿರುವ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 4 ರಂದು ನೆಲ್ಲುಡಿ ಕೊಟಾಲ್ನಲ್ಲಿರುವ ಎಟಿಎಂನಲ್ಲಿ ಈ ದರೋಡೆ ನಡೆದಿತ್ತು. ಏಪ್ರಿಲ್ 20 ರಂದು ಎಟಿಎಂ ಮಷಿನ್ನಲ್ಲಿ ಹಣ ದರೋಡೆ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಎಟಿಎಂ ಮಷಿನ್ ನಿರ್ವಾಹಕ ಎಂಜಿನಿಯರ್ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ. ಈ ದರೋಡೆ ನಡೆದು 20 ದಿನಗಳಲ್ಲಿ ಈ ಪ್ರಕರಣವನ್ನ ಭೇದಿಸುವಲ್ಲಿ ಕುರುಗೋಡಿನ ಸಿಪಿಐ ವಿ.ಚಂದನ ಗೋಪಾಲ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಎಟಿಎಂ ಮಷಿನ್ಗಳ ನಿರ್ವಾಹಕ ಉಸ್ತುವಾರಿ ವಹಿಸಿದ್ದ ಕಸ್ಟಮ್ ಸರ್ವೀಸ್ನ ಎಂಜಿನಿಯರ್ ಲೋಕೇಶ ಹಾಗೂ ಕೆ.ವೀರೇಶ ಮತ್ತು ಎಂ.ಡಿ.ಶ್ರೀನಿವಾಸ ಎಂಬುವರನ್ನ ಕುರುಗೋಡು ಪೊಲೀಸರು ಬಂಧಿಸಿದ್ದಾರೆ. ಎರಡು ಸೀಕ್ರೆಟ್ ಕೋಡ್ಗಳನ್ನ ಬಳಸಿ ಎಟಿಎಂನಲ್ಲಿ ಹಣ ದೋಚಲಾಗಿದೆ. ಈ ಮೂವರು ಆರೋಪಿಗಳಿಂದ ರೂ. 8 ಲಕ್ಷದ 26 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಬೈಕ್, ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಬ್ಲಾಕ್ ಸ್ಪ್ರೇ, ಪ್ಯಾಂಟ್, ಟಿ ಶರ್ಟ್, 1 ನಂಬರ್ ಪ್ಲೇಟ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ಅವರ ಸೂಚನೆಯ ಮೇರೆಗೆ ಡಿವೈಎಸ್ಪಿ ಎಂ.ಜಿ. ಸತ್ಯ ನಾರಾಯಣ ರಾವ್ ಅವರ ಮಾರ್ಗದರ್ಶನದಲ್ಲಿ ಕುರುಗೋಡು ಸಿಪಿಐ ವಿ. ಚಂದನ ಗೋಪಾಲ್ ನೇತೃತ್ವದಲ್ಲಿ ಪಿಎಸ್ಐ ಮೌನೇಶ ರಾಥೋಡ, ಸಿಬ್ಬಂದಿಯರಾದ ಮಹೇಶ, ರವಿಚಂದ್ರ, ಶ್ರೀನಿವಾಸ, ದೇವೇಂದ್ರ, ನಾಗಿರೆಡ್ಡಿ, ನಾಗರಾಜ, ಅನ್ವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದರು.