ಬೆಳಗಾವಿ :ಕಳೆದ 20 ದಿನಗಳ ಹಿಂದೆ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಜ್ಯೋತೆಪ್ಪಾ ಮುಗದುಮ್(27), ವಸಂತ ಬಮ್ಮವ್ವಗೋಳ(27) ಹಾಗೂ ಬಸವನಗರ ಕಲ್ಲೋಳ್ಳಿ ಗ್ರಾಮದ ಭೀಮಪ್ಪ ಬಾನಸಿ (27) ಬಂಧಿತರು. ಆರೋಪಿಗಳೆಲ್ಲರೂ ಕೊಲೆಯಾದ ಶಿವಾನಂದನ ಕಾಚ್ಯಾಗೋಳ ಎಂಬುವನ ಸ್ನೇಹಿತರಾಗಿದ್ದವರು.
ಕೊಲೆ ಹಿಂದಿನ ರಹಸ್ಯ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಗ್ರಾಮದ ಚೂನಿಮಟ್ಟಿ ತೋಟದ ನಿವಾಸಿಯಾಗಿರುವ ಶಿವಾನಂದನ ಕಾಚ್ಯಾಗೋಳ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ. ಕೊಲೆ ಆರೋಪದಲ್ಲಿ ಈಗಾಗಲೇ ಬಂಧಿತನಾಗಿರುವ ಭೀಮಪ್ಪ ಬಾನಸಿಯ ತಂಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿ 2014ರಲ್ಲಿ ಪೋಕ್ಸೊ ಕಾಯ್ದೆಯಡಿ ಶಿವಾನಂದ ಜೈಲು ಸೇರಿರುತ್ತಾನೆ.
1 ವರ್ಷ 9 ತಿಂಗಳು ಜೈಲುವಾಸ ಅನುಭವಿಸಿದ್ದ ಶಿವಾನಂದ ಬಳಿಕ ಆರೋಪಿ ಭೀಮಪ್ಪನನ್ನು ಸಂಪರ್ಕಿಸಿ ನಿನ್ನ ತಂಗಿಯನ್ನು ಮದುವೆಯಾಗುವುದಾಗಿ ಭರವಸೆ ಕೊಡುತ್ತಾನೆ. ಆತನ ಮಾತು ನಂಬಿದ ಭೀಮಪ್ಪ ಬಾನಸಿ ಶಿವಾನಂದನಿಗೆ ಜಾಮೀನು ಕೊಡಿಸಿ ಗೆಳೆಯನ ಕೃತ್ಯವನ್ನೆಲ್ಲ ಸಹಿಸಿಕೊಂಡು ಹೊರ ಕರೆದುಕೊಂಡು ಬಂದಿದ್ದ.