ಚಿಕ್ಕೋಡಿ:ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದಲ್ಲಿ ಮತದಾನ ನಡೆದಿದೆ. ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಯಾರ ಕೊರಳಿಗೆ ವಿಜಯದ ಮಾಲೆ ಎಂಬುದು ಡಿಸೆಂಬರ್ 9ರಂದು ತಿಳಿಯಲಿದೆ.
ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಹಾಗೂ ಸಹೋದರ ಶಿವಗೊಂಡ ಕಾಗೆ, ಬೆಳ್ಳಂಬೆಳಗ್ಗೆ ಏಳು ಗಂಟೆ ಸುಮಾರಿಗೆ ಉಗಾರ ಖುರ್ದ ಗ್ರಾಮದ ಎಸ್ಹೆಚ್ವಿ ಕಾಲೇಜು ಮತಗಟ್ಟೆ 195ರಲ್ಲಿ ಮತದಾನ ಮಾಡಿದರು. ಈ ವೇಳೆ ಮತದಾರರು ನನಗೆ ಮತ ಹಾಕುತ್ತಾರೆ. ನಾನು ಗೆಲ್ಲುವುದು ನಿಶ್ಚಿತ ಎಂದು ಕಾಗೆ ಅಭಿಪ್ರಾಯಪಟ್ಟರು.
ಮೋಳೆ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಡ್ ನಂಬರ್ 44ರಲ್ಲಿ ಮುಂಜಾನೆ 8.30ರ ಸುಮಾರಿಗೆ ಮತದಾನ ಮಾಡಿದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ, ಈ ಬಾರಿ ನೂರಕ್ಕೆ ನೂರು ಪ್ರತಿಶತ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಕುಟುಂಬ ಸದಸ್ಯರ ಸಮೇತ ಆಗಮಿಸಿ 11.40ಕ್ಕೆ ಮತದಾನ ಮಾಡಿದರು. ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 88ರಲ್ಲಿ ಮತದಾನ ಮಾಡಿದರು.
ಕಾಗವಾಡದಲ್ಲಿ ಯಾರಿಗೆ ವಿಜಯ ಮಾಲೆ? ಈಗಾಗಲೇ ಮತಕ್ಷೇತ್ರದ ತುಂಬೆಲ್ಲಾ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದರಂತೆ ಈಗಾಗಲೇ ಹಲವಾರು ಬೆಂಬಲಿಗರು ನಮ್ಮ ಜೊತೆಗಿದ್ದಾರೆ. ಈ ಬಾರಿ ನನ್ನ ಗೆಲುವು ನಿಶ್ಚಿತ. ಕಳೆದ ಬಾರಿ ಕಾಗವಾಡ ಕ್ಷೇತ್ರದ ಜನ 33 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಈ ಬಾರಿ ಅದಕ್ಕಿಂತಲೂ ಹತ್ತರಿಂದ ಹದಿನೈದು ಸಾವಿರ ಮತಗಳು ಜಾಸ್ತಿ ಬೀಳುತ್ತವೆ. ಈ ಬಾರಿಯೂ ಗೆಲುವು ನನ್ನದೇ ಎಂದರು.
ಒಟ್ಟಾರೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಮೂವರು ಹಾಗೂ ಪಕ್ಷೇತರ 6 ಅಭ್ಯರ್ಥಿಗಳಲ್ಲಿ ಯಾರು ಕಾಗವಾಡ ಮತಕ್ಷೇತ್ರದ ದೊರೆಯಾಗುತ್ತಾರೆ ಎಂಬುವುದು ಡಿ. 9ರಂದು ತಿಳಿಯಲಿದೆ. ಮತದಾರ ಪ್ರಭು ಯಾರಿಗೆ ವಿಜಯದ ಮಾಲೆ ಹಾಕಿದ್ದಾನೆ ಎಂಬುವುದನ್ನು ಕಾದು ನೋಡಬೇಕಿದೆ.