ಚಿಕ್ಕೋಡಿ : ಕಳ್ಳತನ ಮಾಡಿ ಮಾರಾಟ ಮಾಡಿದ್ದ 21 ಬೈಕ್, 1 ಟ್ರ್ಯಾಕ್ಟರ್ ಸೇರಿದಂತೆ ಒಟ್ಟು 8 ಲಕ್ಷ 50 ಸಾವಿರ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದ ಅಥಣಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರ ಬಂಧನ
ವಾಹನಗಳನ್ನು ಕಳ್ಳತನ ಮಾಡಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 21 ಬೈಕ್, 1 ಟ್ರ್ಯಾಕ್ಟರ್ ಹಾಗೂ 8 ಲಕ್ಷ 50 ಸಾವಿರ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
ಸಪ್ತಸಾಗರ ಗ್ರಾಮದ ರಾಜಕುಮಾರ ಚುನಾರ (28), ರವಿಚಂದ್ರ ಚುನಾರ (27) ಮತ್ತು ನದಿ ಇಂಗಳಗಾಂವ ಗ್ರಾಮದ ರಾಜು ಮುದಿಗೌಡರ್ (38) ಬಂಧಿತ ಆರೋಪಿಗಳು.
ಬಂಧಿತರು ಕಳ್ಳತನವನ್ನೇ ದಂಧೆಯನ್ನಾಗಿಸಿಕೊಂಡಿದ್ದರು. ಕಳೆದ ಎರಡು ವರ್ಷದಿಂದ ಕಳ್ಳತನ ಮಾಡಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ಗಳನ್ನು ಮಾರಾಟ ಮಾಡಿಕೊಂಡು ಬಂದಿದ್ದರು. ಪ್ರಕರಣವನ್ನು ಬೆನ್ನತ್ತಿದ ಅಥಣಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.