ಚಿಕ್ಕೋಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಶೀಘ್ರ ಗುಣಮುಖರಾಗುವ ಸಲುವಾಗಿ ಯಾವುದೇ ದೊಡ್ಡ ಖಾಸಗಿ ಆಸ್ಪತ್ರೆಗೆ ಸೇರಿಲ್ಲ. ಬದಲಾಗಿ ನಿಪ್ಪಾಣಿ ನಗರದಲ್ಲಿ ತೆರೆಯಲಾದ ಕೊರೊನಾ ಕೇರ್ ಸೆಂಟರ್ನಲ್ಲಿಯೇ ಜನ ಸಾಮಾನ್ಯರಂತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಮಂತರು ಹಾಗೂ ವಿವಿಧ ರಾಜಕಾರಣಿಗಳು ಕೊರೊನಾ ಚಿಕಿತ್ಸೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರಿಗೂ ಸಹ ಕೊರೊನಾ ಸೋಂಕು ತಗುಲಿದ್ದು, ತಮ್ಮ ಪ್ರಾಯೋಜಕತ್ವದಲ್ಲೇ ತೆರೆದಿರುವ ಕೊರೊನಾ ಕೇರ್ ಸೆಂಟರ್ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಅವರ ಮಕ್ಕಳಾದ ಬಸವ ಪ್ರಸಾದ ಜೊಲ್ಲೆ, ಜ್ಯೋತಿ ಪ್ರಸಾದ ಜೊಲ್ಲೆಯವರಿಗೂ ಸಹ ಕೊರೊನಾ ಸೋಂಕು ದೃಢವಾಗಿತ್ತು. ಇದೀಗ ಇಬ್ಬರು ಮಕ್ಕಳು ಕೊರೊನಾದಿಂದ ಮುಕ್ತರಾಗಿದ್ದು, ಸಚಿವರು ಮಾತ್ರ ಕೊರೊನಾದಿಂದ ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ತಮ್ಮದೇ ಸಹಯೋಗದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿತ್ಯ ಕೊರೊನಾ ರೋಗಿಗಳ ಜೊತೆ ಯೋಗಾಸನ, ಪೂಜೆ, ವಿವಿಧ ಆಟಗಳನ್ನು ಸಚಿವರು ಆಡುತ್ತಿದ್ದಾರೆ. ಜೊತೆಗೆ ಆಸ್ಪತ್ರೆಯ ಇತರ ಕೊರೊನಾ ರೋಗಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ತಮಗಿರುವ ಅನುಕೂಲತೆಗಳನ್ನು ಬಳಸಿಕೊಂಡು ಶಶಿಕಲಾ ಜೊಲ್ಲೆ ಅವರು ಅತ್ಯಂತ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಿತ್ತು. ಆದರೆ, ಸಾಧಾರಣ ಕೇರ್ ಸೆಂಟರ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಾ, ಜನರಲ್ಲಿದ್ದ ಕೊರೊನಾ ಭಯವನ್ನು ಕೊಂಚಮಟ್ಟಿಗೆ ದೂರ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ನಿಪ್ಪಾಣಿ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.