ಬೆಳಗಾವಿ: ಒಂದು ದಶಕದ ನಂತರ ಬಹುದಿನಗಳ ಬೇಡಿಕೆಯಿಂದ ರೂಪುಗೊಂಡಿರುವ ಕನ್ನಡ ಭವನ ರಂಗಮಂದಿರದ ಉದ್ಘಾಟನೆ ಇದೇ 27 ಡಿಸೆಂಬರ್ 2022 ರಂದು ಜರುಗಲಿದೆ ಎಂದು ಕನ್ನಡ ಸಾಂಸ್ಕೃತಿಕ ಭವನದ ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.
ಸಾಹಿತಿಗಳ, ಕಲಾವಿದರ, ಅಪ್ಪಟ ಕನ್ನಡ ಅಭಿಮಾನಿಗಳ ಕನಸಿನ ಕೂಸು ಬೆಳಗಾವಿಯ ಕನ್ನಡ ಭವನ ರಂಗಮಂದಿರ ಎಲ್ಲರ ಆಸೆಯಂತೆ ಪೂರ್ಣವಾಗಿ ನಿರ್ಮಾಣವಾಗಿ ತಲೆ ಎತ್ತಿ ನಿಂತಿದೆ. ಇದೀಗ ಸದ್ಯದಲ್ಲೇ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಈ ರಂಗಮಂದಿರ ಭವನದ ಉದ್ಘಾಟನ ಕಾರ್ಯಕ್ರಮವು ವಿಜೃಂಭಣೆಯಿಂದ ನೆರೆವೇರಲಿದೆ.
ಎಂಟು ಕೋಟಿ ವೆಚ್ಚದ ರಂಗಮಂದಿರ:ಹೌದು, ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಕರ್ಷಕವಾದ ಕನ್ನಡ ಭವನ ರಂಗಮಂದಿರ ಕಟ್ಟಡ ಉದ್ಘಾಟನೆ ಸಮಾರಂಭ ಮಂಗಳವಾರ ಡಿಸೆಂಬರ್ 27 ರಂದು ನಡೆಯಲಿದ್ದು, ದಿವ್ಯ ಸಾನಿಧ್ಯ ಎಡೆಯೂರು ಜಗದ್ಗುರು ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು, ಬೆಳಗಾವಿ ಕನ್ನಡ ಭವನ ರಂಗಮಂದಿರದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಬೆಳಗಾವಿ ನಗರದಲ್ಲಿ ಕನ್ನಡ ರಂಗಮಂದಿರ ಭವನದ ಕುರಿತಾಗಿ ಬಹುದಿನಗಳಿಂದ ಸರ್ಕಾರಕ್ಕೆ ಬೇಡಿಕ್ಕೆ ಇಡಲಾಗಿತ್ತು, ಸದ್ಯ ಈಗ ಎಲ್ಲವೂ ಮುಗಿದು ಉದ್ಘಾಟನೆ ಸಮಾರಂಭದ ಸಮಯ ಬಂದಿದೆ ಎಂದು ಹೇಳಿದರು.
ಹವಾ ನಿಯಂತ್ರಿತ ಭವನ:ಅಲ್ಲದೆ, ಕನ್ನಡ ಭವನದ ರಂಗ ಮಂದಿರವು ವಿಶಾಲವಾದ ಪ್ರಾಂಗಣವನ್ನು ಹೊಂದಿರುವುದರ ಜೊತೆಗೆ ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಸುಸಜ್ಜಿತವಾದ ಮುನ್ನೂರಕ್ಕು (300) ಕ್ಕೂ ಹೆಚ್ಚು ಆಸನಗಳನ್ನು ಭವನ ಹೊಂದಿದೆ. ಸಾಹಿತಿಗಳಿಗೆ ಕಲಾವಿದರಿಗೆ ಉಳಿದುಕೊಳ್ಳಲು ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಅತ್ಯಾಧುನಿಕ ತಾಂತ್ರಿಕ ಧ್ವನಿ ವ್ಯವಸ್ಥೆಯೊಂದಿಗೆ ಧ್ವನಿ ಮುದ್ರಣವನ್ನು ಕೂಡ ಹೊಂದಿದೆ.