ಬೆಳಗಾವಿ:ಲಖನ್ ಜಾರಕಿಹೊಳಿ ಬೆಂಬಲದಿಂದ ಬಿಜೆಪಿಗೆ ಬಹಳಷ್ಟು ಶಕ್ತಿ ಬಂದಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತರು. ಹೀಗಾಗಿ ನಿನ್ನೆ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಈರಣ್ಣ ಕಡಾಡಿ ಎಲ್ಲರೂ ಸೇರಿ ಗೋಕಾಕನಲ್ಲಿರುವ ಅವರ ಮನೆಗೆ ಭೇಟಿ ಮಾಡಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಬಗ್ಗೆ ಭ್ರಮನಿರಸನವಾಗಿದ್ದು, ಎಲ್ಲೋ ಒಂದು ಕಡೆ ಅತೃಪ್ತಿ ಕಾಡುತ್ತಿದೆ. ಕಳೆದ ಬಾರಿ ಅವರನ್ನು ಕಾಂಗ್ರೆಸ್ ಪಕ್ಷ ಬಲಾತ್ಕಾರವಾಗಿ ಚುನಾವಣೆಗೆ ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂಬ ಅಸಮಾಧಾನ ಅವರಲ್ಲಿದೆ. ನಾವು ಕೂಡ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿಗೆ ಸಹಕಾರ ಕೊಡಿ ಅಂತಾ ಲಖನ್ ಜಾರಕಿಹೊಳಿಗೆ ಮನವಿ ಮಾಡಿಕೊಂಡಿದ್ದೇವೆ. ಅವರೂ ಕೂಡ ಬಿಜೆಪಿಗೆ ಸಹಕಾರ ಕೊಡ್ತೀನಿ ಅಂದಿದ್ದಾರೆ. ಲಖನ್ ಜಾರಕಿಹೊಳಿ ಬೆಂಬಲದಿಂದ ಬಿಜೆಪಿಗೆ ಬಹಳಷ್ಟು ಶಕ್ತಿ ಬಂದಿದೆ ಎಂದರು.
ಮಂಗಳಾ ಅಂಗಡಿ ಪರವಾಗಿ ಇಂದು ಸವದತ್ತಿ, ರಾಮದುರ್ಗ ತಾಲೂಕಿನ ಗ್ರಾಮಗಳಲ್ಲಿ ಮತಯಾಚನೆ ಮಾಡ್ತೇನೆ. ಸಂಜೆ ಮಸ್ಕಿಗೆ ಚುನಾವಣಾ ಪ್ರಚಾರಕ್ಕಾಗಿ ತೆರಳಲಿದ್ದೇನೆ. ನಿನ್ನೆ ಗೋಕಾಕ, ಅರಭಾವಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇವೆ. ಗೋಕಾಕ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಲೀಡ್ ಕೊಡೋದಾಗಿ ಮತದಾರರು ಹೇಳಿದ್ದಾರೆ. ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಇಂದು ಬೆಳಗಾವಿಗೆ ಸಿಎಂ ಬಂದು ನಾಳೆ ಪ್ರಚಾರ ಮಾಡಲಿದ್ದಾರೆ ಎಂದರು.
ತಾಕತ್ ಇದ್ರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ಎಂಬ ಎಂ.ಬಿ.ಪಾಟೀಲ್ ಸವಾಲು ವಿಚಾರಕ್ಕೆ, ಸರ್ಕಾರ ಯಾರಾದರೂ ವಿಸರ್ಜನೆ ಮಾಡ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ವಿಸರ್ಜನೆ ಮಾಡಿದ್ರಾ? ಇವರು ಅಧಿಕಾರದಲ್ಲಿ ಇದ್ದಾಗ ವಿಸರ್ಜನೆ ಮಾಡಬೇಕಿತ್ತಲ್ಲ?. ಕಾಂಗ್ರೆಸ್ನವರು ವಿಸರ್ಜನೆ ಮಾಡಿದ್ರೆ ನಾವು ಆ ಬಗ್ಗೆ ಚಿಂತನೆ ಮಾಡಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇದೇ ವೇಳೆ ಸಾರಿಗೆ ನೌಕರರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಒಬ್ಬ ಸಚಿವನಾಗಿ ಸಾರಿಗೆ ನೌಕರರು ಮುಷ್ಕರ ಕೈ ಬಿಡಬೇಕೆಂದು ಮನವಿ ಮಾಡಿಕೊಂಡರು.