ಅಥಣಿ :ರಾಜ್ಯ ಸರ್ಕಾರದ ನಿರ್ದೇಶನದಂತೆ ಇಂದು 30 ವಲಸೆ ಕಾರ್ಮಿಕರು ತಮ್ಮ ರಾಜ್ಯ ಛತ್ತೀಸ್ಗಢದತ್ತ ಪ್ರಯಾಣ ಬೆಳೆಸಿದರು.
ಕಳೆದ 70 ದಿನಗಳ ಹಿಂದೆ ಛತ್ತೀಸ್ಗಢ್ ಕಾರ್ಮಿಕರು ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದನ್ನ ಗಮನಿಸಿ ಗ್ರಾಮಸ್ಥರು, ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ಎಚ್ಚೆತ್ತಿದ್ದ ತಾಲೂಕು ಆಡಳಿತ, ಸಂಕ್ರಟ್ಟಿ ಗ್ರಾಮದಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡಿತ್ತು.
ಕಳೆದ ವಾರ ಸ್ಥಳಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿ ಕಾರ್ಮಿಕರನ್ನು ಮರಳಿ ಅವರು ಊರಿಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರ ಪ್ರಕಾರ ಕ್ವಾರಂಟೈನ್ ಅವಧಿ ಮುಕ್ತಾಯ ಹೊಂದಿದ ಮೇಲೆ ಕೊರೊನಾ ಲಕ್ಷಣಗಳು ಕಾಣದೆ ಇರುವ ಕಾರಣ, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ನೇತೃತ್ವದಲ್ಲಿ ಛತ್ತೀಸ್ಗಢ್ ರಾಜ್ಯದ 30 ಕಾರ್ಮಿಕರನ್ನು ಕೆಎಸ್ಆರ್ಟಿಸಿ ಬಸ್ ಮುಖಾಂತರ ಅವರ ಊರಿಗೆ ಕಳುಹಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ, ಪಿಡಿಒ ಎಸ್ಎಸ್ ಸತ್ತಿಗೇರಿ, ಹಾಗೂ ಸಂಕ್ರಟ್ಟಿ ಗ್ರಾಮದ ಹಿರಿಯರು ಈ ವೇಳೆ ಕಾರ್ಮಿಕರನ್ನು ಬೀಳ್ಕೊಟ್ಟರು.