ಬೆಂಗಳೂರು:ನಗರದಲ್ಲಿನ ಸಂಚಾರದಟ್ಟಣೆ ನಿವಾರಿಸುವ ಸಲುವಾಗಿ ಫ್ಲೈಓವರ್, ಅಂಡರ್ ಪಾಸ್ ನಿರ್ಮಿಸಲಾಗುತ್ತದೆ. ಆದರೆ, ನಿರ್ಮಾಣ ಕಾರ್ಯ ವರ್ಷಾನುಗಟ್ಟಲೆ ನಡೆದರೆ ಸಾರ್ವಜನಿಕರ ಪರದಾಟ ದುಪ್ಪಟ್ಟಾಗುತ್ತದೆ. ಸದ್ಯ ಕುಂದಲಹಳ್ಳಿ ಜಂಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ನದ್ದೂ ಅದೇ ಹಣೆಬರಹ.
ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಲಭಿಸಬೇಕಾಗಿದ್ದ ಮಹದೇವಪುರ ಕ್ಷೇತ್ರದ ಮಾರತ್ ಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಇನ್ನೂ ಕುಂಟುತ್ತಲೇ ಸಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸಿಗ್ನಲ್ ಫ್ರೀ ಕಾರಿಡಾರ್ ಹೆಸರಲ್ಲಿ ಕಾಮಗಾರಿ ಆರಂಭಗೊಂಡಿತು. ಇದೇ ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕಾಗಿತ್ತು. ಆದರೆ, ಕಾಮಗಾರಿ ಮಾತ್ರ ಅರ್ಧದಷ್ಟೇ ಆಗಿದೆ.