ಬೆಂಗಳೂರು :ಪಕ್ಷದ ರಾಷ್ಟ್ರೀಯ ನಾಯಕರ ವಿಚಾರ ಮುಂದಿಟ್ಟು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆಸಿವೆ. ಸಾಮಾಜಿಕ ಜಾಲತಾಣದಲ್ಲಿ ಉಭಯ ಪಕ್ಷದ ರಾಜ್ಯ ಮಟ್ಟದ ಟ್ವೀಟ್ ಖಾತೆಯಲ್ಲಿ ನಿರಂತರವಾಗಿ ವಾಕ್ಸಮರ ನಡೆಯುತ್ತಲೇ ಇದೆ.
ಇದೀಗ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ವಿಚಾರವನ್ನು ಇಟ್ಟುಕೊಂಡು ಟ್ವೀಟ್ ಸಮರ ನಡೆಸಲಾಗಿದೆ. ಮೊದಲು ಟ್ವೀಟ್ ಮಾಡಿದ್ದ ಬಿಜೆಪಿ, ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿ ಅವರು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬಬ್ಬರ್ ಶೇರ್ ಎಂದಿದ್ದರು.
ಆದರೆ, ಅದೇ ಯೋಜನೆ ಇಂದು ದೇಶದಲ್ಲಿ ಕ್ರಾಂತಿ ಮಾಡುತ್ತಿದೆ. ಬಾದಾಮಿ ಹುಲಿಯಾ ಸಿದ್ದರಾಮಯ್ಯ ಅವರು ಆತ್ಮ ನಿರ್ಭರ ಭಾರತ ಬಜೆಟ್ ಅನ್ನು ಆತ್ಮಬರ್ಬರ ಎಂದಿದ್ದಾರೆ. ಕಾದು ನೋಡಿ! ಕಾಲ ಬದಲಾದರೂ ಕಾಂಗ್ರೆಸ್ ಬದಲಾಗದು ಎಂದು ಲೇವಡಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷ, ರಾಜ್ಯ ಬಿಜೆಪಿ ಪಕ್ಷವು ಕೊರೊನಾ, ಚೀನಾ ಅತಿಕ್ರಮಣ, ಆರ್ಥಿಕತೆಯ ಅವನತಿ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಮಾತು ಕೇಳಿದ್ದರೆ ದೇಶದ ಸ್ಥಿತಿ ಆತ್ಮ ಬರ್ಬರವಾಗುತ್ತಿರಲಿಲ್ಲ. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸಬಲ್ಲರು. ಶೋಕಿವಾಲಾ ನರೇಂದ್ರ ಮೋದಿ ಮನ್ ಕಿ ಬಾತ್ ಬಿಟ್ಟು, ತಾಕತ್ತಿದ್ದರೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನೆದುರಿಸಲಿ ಎಂದಿತ್ತು.
ಈ ಪ್ರಶ್ನೆಗೆ ಮರಳಿ ಪ್ರತಿಕ್ರಿಯೆ ನೀಡಿದ ಬಿಜೆಪಿ, ಜನರಿಂದ ತಿರಸ್ಕರಿಸಲ್ಪಟ್ಟು ಚುನಾವಣೆಗಳಲ್ಲಿ ಸೋತಾಗಲೆಲ್ಲ ಅಜ್ಜಿ ಮನೆಗೆ ರಜೆಯ ಮೇಲೆ ತೆರಳುವ ಟ್ವಿಟರ್ ಟ್ರೋಲ್ ಗೆ ಎಲ್ಲವೂ ಬರ್ಬರವಾಗಿ ಕಾಣುವುದು. ಪತ್ರಿಕಾಗೋಷ್ಠಿಯ ಮೂಲಕ ದೇಶ ನಡೆಸಲಾಗುವುದಿಲ್ಲ, ದೇಶವನ್ನು ಮುನ್ನಡೆಸಲು ಏನು ಮಾಡಬೇಕೋ ಅದನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಅಧಿಕಾರವಿಲ್ಲದೇ ಹತಾಶೆ ಕಾಂಗ್ರೆಸ್ ಕಾಡುತ್ತಿದೆ! ಎಂದಿತ್ತು.
ಇದೀಗ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಆಡಳಿತಾವಧಿಯನ್ನು ವಿದೇಶ ಸುತ್ತುವ ಮೋಜಿನಲ್ಲಿ ಕಳೆದ ಫೇಕು ಎಕ್ಸ್ಪ್ರೆಸ್ ಮಾಡಿದ್ದು. ಪುಲ್ವಾಮ ದಾಳಿಯಾದಾಗ - ಶೂಟಿಂಗ್, ಕೊರೊನಾ ಬಂದಾಗ - ನಮಸ್ತೆ ಟ್ರಂಪ್, ಚೀನಾ ಅತಿಕ್ರಮಿಸಿದಾಗ - ಫೋಟೋಶೂಟ್! ಉತ್ತರ ಕೊಡಲಾಗದ ಉತ್ತರಕುಮಾರನಿಗೆ ಪತ್ರಿಕಾಗೋಷ್ಠಿ ನಡೆಸುವ ಎದೆಗಾರಿಕೆ ಎಲ್ಲಿದೆ! ದೇಶ ನಡೆಸುವುದೆಂದರೆ ನವಿಲಿಗೆ ಕಾಳು ಹಾಕುವುದಲ್ಲ! ಅರಿಯಿರಿ ಎಂದಿದೆ.
ಒಟ್ಟಾರೆ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತಮ್ಮ ರಾಷ್ಟ್ರೀಯ ನಾಯಕನ ಮುಂದಿಟ್ಟು ನಡೆಯುತ್ತಿರುವ ಟ್ವೀಟ್ ವಾರ್ ಇನ್ನಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.