ಕರ್ನಾಟಕ

karnataka

ಡಿಜಿಪಿ ಪ್ರವೀಣ್​ ಸೂದ್​ ವಿರುದ್ಧ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

By

Published : Feb 20, 2020, 9:57 PM IST

Updated : Feb 20, 2020, 11:06 PM IST

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​ ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್​ ಆದೇಶಕ್ಕೆ ತಡೆ ನೀಡಿದೆ.

supreme-barrier-to-order-of-nbw-against-dg-praveen-sood-by-high-court
ಹೈಕೋರ್ಟ್: ಆದೇಶಕ್ಕೆ ಸುಪ್ರೀಂ ತಡೆ

ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್​ ಹೊರಡಿಸಿದ್ದ ರಾಜ್ಯ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆಯಾಜ್ಞೆ ನೀಡಿದೆ.

ಡಿವೈಎಸ್ಪಿ ಎಸ್‌ಎಸ್‌ ಕಾಶಿ ತಮ್ಮ 24 ವರ್ಷಗಳ ಸೇವಾ ಅವಧಿಯಲ್ಲಿ 30ನೇ ಬಾರಿಗೆ ಮಾಡಿದ್ದ ವರ್ಗಾವಣೆ ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ(ಕೆಎಟಿ) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೆಎಟಿ ವಜಾಗೊಳಿಸಿದ ಬಳಿಕ ಕಾಶಿ ಅವರು ರಾಜ್ಯ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಸತ್ಯನಾರಾಯಣ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಫೆ.11ರಂದು ನಡೆದ ವಿಚಾರಣೆ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅರ್ಜಿದಾರ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಸಲ್ಲಿಸುವಂತೆ ಪೀಠ ಆದೇಶಿಸಿತ್ತು.

ಅದರಂತೆ ಫೆ.14ರ ಒಳಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನ್ಯಾಯಾಲಯಕ್ಕೆ ವಿವರಣೆ ನೀಡಬೇಕಿತ್ತು. ಆದರೆ ಪ್ರಕರಣದ ವಿಚಾರಣೆ ಫೆ.18ರಂದು ಬೆಳಗ್ಗೆ ಆರಂಭವಾದಾಗಲೂ ಡಿಜಿ ಅಂಡ್​​ ಐಜಿಪಿ ಕಡೆಯಿಂದ ಯಾವುದೇ ವರದಿ ಬಂದಿರಲಿಲ್ಲ ಎನ್ನಲಾಗ್ತಿದೆ. ಈ ಕುರಿತು ವಿವರಣೆ ನೀಡಲು ಮತ್ತೋರ್ವ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕಳುಹಿಸಲಾಗಿತ್ತು. ಜತೆಗೆ ಸರ್ಕಾರದ ಪರ ವಕೀಲರು ಈ ಕುರಿತು ಮಾಹಿತಿ ನೀಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.

ಆದರೆ, ಕೋರ್ಟ್ ಆದೇಶ ಪಾಲಿಸುವಲ್ಲಿ ವಿಫಲರಾಗಿರುವ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು ಸಂಜೆ 4.45ರ ಳಗೆ ಬಂದು ನ್ಯಾಯಾಲಯಕ್ಕೆ ವಿವರಣೆ ನೀಡುವಂತೆ ಆದೇಶಿಸಿತ್ತು. ಸಂಜೆಯಾದರೂ ಅಧಿಕಾರಿ ನ್ಯಾಯಾಲಯಕ್ಕೆ ಆಗಮಿಸದೇ ಇದ್ದುದರಿಂದ ಪೀಠ, ಡಿಜಿಪಿ ಅವರನ್ನು ಬಂಧಿಸಿ ಫೆ.25ರಂದು ವಿಚಾರಣೆ ವೇಳೆ ಹಾಜರುಪಡಿಸುವಂತೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು.

ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಡಿಜಿಪಿ ಪ್ರವೀಣ್ ಸೂದ್ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವ ಅಗತ್ಯವಿತ್ತು. ಏಕೆಂದರೆ ಇತ್ತೀಚೆಗಷ್ಟೇ ಅಧಿಕಾರಿ ತಮ್ಮ ಡಿಜಿ-ಐಜಿಪಿ ಹುದ್ದೆಗೆ ನಿಯೋಜಿತರಾಗಿದ್ದಾರೆ. ಹೀಗಾಗಿ ಹೈಕೋರ್ಟ್ ವಿಭಾಗೀಯ ಪೀಠ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್​ಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​ ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಇಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.

Last Updated : Feb 20, 2020, 11:06 PM IST

ABOUT THE AUTHOR

...view details