ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್ ಅವರ ಅಮಾನತು ಆದೇಶ ಹಿಂಪಡೆದು ಕಾಂಗ್ರೆಸ್ ಪಕ್ಷ ಶಾಸಕ ಆನಂದ ಸಿಂಗ್ ವಿರೋಧವನ್ನು ಕಟ್ಟಿಕೊಂಡಿತಾ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯಲ್ಲಿ ಮೂಡುತ್ತಿದೆ.
ಶಾಸಕರಾದ ಕಂಪ್ಲಿ ಗಣೇಶ ಮತ್ತು ಆನಂದ ಸಿಂಗ್ ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಪರಭಾರೆಗಿಂತಲೂ ಕಂಪ್ಲಿ ಗಣೇಶ್ ಅಮಾನತು ಹಿಂದಕ್ಕೆ ಪಡೆದಿರುವುದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಆನಂದ್ ಸಿಂಗ್ ಅವರೇ ಸ್ವತಃ ಜಿಂದಾಲ್ಗೆ ಭೂಮಿ ಪರಭಾರೆ ಮಾಡಿದ ಪ್ರಕರಣ ತಮ್ಮ ರಾಜೀನಾಮೆಗೆ ಪ್ರಮುಖ ಕಾರಣವೆಂದು ಹೇಳಿದ್ದಾರಾದರೂ, ಅಸಲೀ ಕಾರಣ ಬೇರೆಯದ್ದೇ ಇದೆ ಎನ್ನಲಾಗುತ್ತಿದೆ.
ಈಗಲ್ಟನ್ ರೆಸಾರ್ಟ್ನಲ್ಲಿ ತಂಗಿದ್ದಾಗ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಾಸಕ ಕಂಪ್ಲಿ ಗಣೇಶ ಅಮಾನತು ಆದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಹಿಂದಕ್ಕೆ ಪಡೆದಿರುವುದು ಆನಂದ್ ಸಿಂಗ್ರಿಗೆ ಪಕ್ಷದ ಮೇಲೆ ಅಸಮಾಧಾನ ತೀವ್ರಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಹಲ್ಲೆ ನಡೆಸಿದ ಶಾಸಕನನ್ನು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರ ಕಳುಹಿಸಿದಕ್ಕೆ ಆನಂದ್ ಸಿಂಗ್ರಿಗೆ ಸ್ವಲ್ಪ ಸಮಾಧಾನ ತರಿಸಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರಕ್ಕೆ ಅಪಾಯ ಒದಗಲಿದೆ. ಪ್ರತಿ ಶಾಸಕನ ಬೆಂಬಲವೂ ಅತ್ಯಗತ್ಯ ಎಂದು ಮನಗಂಡು ಕಂಪ್ಲಿ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಮತ್ತೆ ಸ್ವಾಗತಿಸಿದೆ.
ಬಿಜೆಪಿ ಗಾಳ ಹಾಕಿದ್ದರೂ ಎನ್ನಲಾದ ಅತೃಪ್ತ ಶಾಸಕರ ಜತೆ ಗಣೇಶ ಸಹ ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎನ್ನುವುದು ತಿಳಿದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಗಣೇಶ್ ಮೇಲಿದ್ದ ಅಮಾನತು ಆದೇಶ ವಾಪಸ್ ಪಡೆದರು. ಈ ಬೆಳವಣಿಗೆ ಶಾಸಕ ಆನಂದ್ ಸಿಂಗ್ ಅವರನ್ನು ಕೆರಳಿಸಿತು. ಕುಟುಂಬದಿಂದಲೂ ಪಕ್ಷದ ಈ ಕ್ರಮಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಯಿ ಎನ್ನಲಾಗಿದೆ. ಹಾಗಾಗಿಯೇ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.