ಬೆಂಗಳೂರು:ಕೆ.ಎಸ್.ಈಶ್ವರಪ್ಪಗೆ ಉಪಮುಖ್ಯಮಂತ್ರಿ ಹುದ್ದೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಕೂಡಲೇ ಡಿಸಿಎಂ ಸ್ಥಾನ ನೀಡಿ ಇಲ್ಲವೇ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದೆ.
ಇಷ್ಟು ದಿನ ತೆರೆಮರೆಗೆ ಸರಿದಿದ್ದ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಡಿಸಿಎಂ ಹುದ್ದೆ ಸೃಷ್ಠಿಸುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ. ಖಾತೆ ಹಂಚಿಕೆ ಸಂದರ್ಭದಲ್ಲಿ ಹಿರಿತನವನ್ನು ಮತ್ತು ರಾಜ್ಯಾದ್ಯಂತ ಇರುವ ಜನಪ್ರಿಯತೆ ಪರಿಗಣಿಸಿಲ್ಲ. ಈಶ್ವರಪ್ಪಗೆ ಉಪಮುಖ್ಯಮಂತ್ರಿ ಹುದ್ದೆ ನೀಡದಿರುವುದು ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯ, ಅಪಮಾನ. ಇದನ್ನು ಹಿಂದುಳಿದ ವರ್ಗದ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.