ಬೆಂಗಳೂರು: ಮುಸ್ಲಿಂ ಬಾಂಧವರಿಗೆ ಸಿಎಎ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅಲ್ಪಸಂಖ್ಯಾತರ ಸಂಪೂರ್ಣ ರಕ್ಷಣೆ ಹೊಣೆ ನಮ್ಮದು. ಶಾಂತಿ ಸುವ್ಯವಸ್ಥೆಗೆ ಸಹಕರಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಸಿಎಂ ಬಿಎಸ್ವೈ
ಸಿಎಎ ಕಾಯ್ದೆ ಅನುಷ್ಠಾನದಿಂದ ಯಾರಿಗೂ ಯಾವುದೇ ತೊಂದರೆ ಆಗಲ್ಲ. ಅದಕ್ಕೆ ನಾನು ಭರವಸೆ ನೀಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 144 ಸೆಕ್ಷನ್ ಜಾರಿ ಮಾಡಿದ್ದಾರೆ. ಹೀಗಾಗಿ ಎಲ್ಲರೂ ಸಹಕರಿಸಬೇಕು. ಕಾಂಗ್ರೆಸ್ನ ಕಿತಾಪತಿ, ಕೈವಾಡದಿಂದಲೇ ಈ ರೀತಿಯ ಪ್ರತಿಭಟನೆ ಆಗ್ತಿದೆ. ಯು.ಟಿ.ಖಾದರ್ ಅವರ ಕೈವಾಡದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ಘಟನೆಗಳಿಗೆ ಕಾಂಗ್ರೆಸ್ ಸಹಕರಿಸಿದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲರು ಆನಂದವಾಗಿ ಓಡಾಡುತ್ತಿದ್ದಾರೆ. ಯಾವುದೇ ರೀತಿಯ ತೊಂದರೆ ಇಲ್ಲ. ಯಾವುದೇ ಮೆರವಣಿಗೆ, ಸಭೆಗಳನ್ನು ಯಾರು ಮಾಡಬಾರದು. ಎಲ್ಲರೂ ಶಾಂತಿ ಕಾಪಾಡಬೇಕು. ಟೌನ್ ಹಾಲ್ನಲ್ಲಿ ನಡೆಯುವ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಪರ-ವಿರೋಧದ ಯಾವುದೇ ಹೋರಾಟಕ್ಕೂ ನಾನು ಅನುಮತಿ ಕೊಟ್ಟಿಲ್ಲ ಎಂದರು.