ಬೆಂಗಳೂರು: ರೈತ ವಿರೋಧಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವವರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಆದ್ರೆ ನಾವೆಲ್ಲ ನಿಜವಾದ ದೇಶಭಕ್ತರು. ರೈತರ ಮೇಲೆ ದೌರ್ಜನ್ಯದ ಕಾನೂನುಗಳನ್ನು ತರುತ್ತಿರುವ ರಾಜಕಾರಣಿಗಳೇ ನಿಜವಾದ ಭಯೋತ್ಪಾದಕರು ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ವಿಧಾನಸೌಧ ಚಲೋ ಪ್ರತಿಭಟನೆಗೆ ಸಾಥ್ ನೀಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೇವಲ 2ನೇ ಸ್ವಾತಂತ್ರ್ಯ ಹೋರಾಟ ಅಷ್ಟೇ ಅಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಾನವ ಕುಲದ ಇತಿಹಾಸದಲ್ಲಿಯೇ ದೊಡ್ಡ ಹೋರಾಟ ಎಂದರು.
ಕೇಂದ್ರದ ನಡೆಗೆ ನಟ ಚೇತನ್ ಆಕ್ರೋಶ ಕೊರೊನಾ ಸಂದರ್ಭದಲ್ಲಿ ಜನ ಆರೋಗ್ಯದ ಮೇಲಿನ ಭಯದಿಂದ ಮನೆಯಲ್ಲಿದ್ದಾಗ ರೈತವಿರೋಧಿ ಕಾಯ್ದೆಗಳನ್ನು ತಂದರು. ದಬ್ಬಾಳಿಕೆ ಮಾಡಿದರು. ಕಾಳಜಿಯಿಲ್ಲದ ಸರ್ಕಾರಗಳು ಬೀಳಲೇಬೇಕು ಎಂದು ನಟ ಚೇತನ್ ಗುಡುಗಿದರು.
ಓದಿ:ಆನ್ಲೈನ್ ಶಿಕ್ಷಣದಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ: ತಜ್ಞರ ವರದಿ ಪಾಲನೆಗೆ ಬದ್ಧವೆಂದ ಸುರೇಶ್ ಕುಮಾರ್
ಅನ್ಯಾಯದ ವಿರುದ್ಧ ನಿಂತ, ರೈತರ ಪರ ನಿಂತವರು ನಿಜವಾದ ದೇಶಭಕ್ತರು. ರಾಜಕೀಯದ ಹೆಸರಲ್ಲಿ, ಧರ್ಮದ ಹೆಸರಲ್ಲಿ ಹಿಂಸೆ ಮಾಡೋದೇ ಭಯೋತ್ಪಾದನೆ. ರೈತರು ಗಾಂಧೀಜಿ ತತ್ವದ ರೀತಿ ಪ್ರತಿಭಟನೆ ಮಾಡ್ತಿದ್ದಾರೆ. ಆದ್ರೆ, ಈಗ ಹಿಂಸೆ ಮಾಡುತ್ತಿರುವುದು ಕೇಂದ್ರ ಸರ್ಕಾರ. ರೈತರಿಗೆ ಜಲಫಿರಂಗಿಗಳನ್ನು, ಮೊಳೆಗಳನ್ನು ಹಾಕೋದು, ಅಶ್ರುವಾಯುಗಳನ್ನು ಸಿಡಿಸುವ ಕೇಂದ್ರ ಸರ್ಕಾರವೇ ನಿಜವಾದ ಭಯೋತ್ಪಾದನೆ ಮಾಡುತ್ತಿದೆ ಎಂದು ಕಿಡಿಕಾರಿದರು.