ಬೆಂಗಳೂರು: ಸುಂಕದ ಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿಯಾಗಿ ಆರು ದಿನಗಳು ಕಳೆದಿವೆ. ಆದರೆ, ಯುವತಿಯನ್ನು ನರಳುವಂತೆ ಮಾಡಿದ ಕಿರಾತಕ ಮಾತ್ರ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ ಎಸ್ಕೇಪ್ ಆಗಿದ್ದಾನೆ. ಆರೋಪಿಯ ಬಂಧನಕ್ಕೆ 10 ತಂಡಗಳನ್ನು ರಚಿಸಿ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರೂ ಸಹ ಆರೋಪಿ ನಾಗೇಶ್ ಪತ್ತೆಯಾಗಿಲ್ಲ. ಈಗ ಆ್ಯಸಿಡ್ ನಾಗನ ಪತ್ತೆಗೆ ಪೊಲೀಸರು ಕರಪತ್ರದ ಮೊರೆಹೋಗಿದ್ದಾರೆ.
ತಮಿಳುನಾಡಿನಲ್ಲಿ ಆರೋಪಿ ನಾಗೇಶ್ಗಾಗಿ ತೀವ್ರ ಶೋಧ :ಏಪ್ರಿಲ್ 27 ರಂದು ಯುವತಿ ಮುತ್ತೂಟ್ ಫಿನ್ ಕಾರ್ಪ್ ಗೆ ಕೆಲಸಕ್ಕೆ ಹೋಗುವ ವೇಳೆ ಕಂಪನಿಯ ಮೆಟ್ಟಿಲುಗಳ ಮೇಲೆಯೇ ನಾಗೇಶ್ ಆ್ಯಸಿಡ್ ದಾಳಿಯನ್ನು ಮಾಡಿದ್ದ. ಆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ತಮಿಳುನಾಡಿಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ತನಿಖೆಯ ವೇಳೆಯಲ್ಲಿಯೂ ನಾಗೇಶ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಟೆಕ್ನಿಕಲ್ ಸಾಕ್ಷ್ಯಾಧಾರಗಳು ಲಭಿಸಿದ್ದವು. ಹೀಗಾಗಿ, ತಮಿಳುನಾಡಿನಲ್ಲೇ ಆರೋಪಿ ಅಡಗಿರಬಹುದು ಎಂಬ ಅನುಮಾನದಲ್ಲಿ ನಾಗೇಶ್ಗಾಗಿ ತೀವ್ರ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ.
ಆಂಜನೇಯ ತಿಲಕಧಾರಿ ನಾಗೇಶ್..!ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ ನಾಗೇಶ್ ಆಂಜನೇಯನ ಭಕ್ತನಾಗಿದ್ದನಂತೆ. ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಆಂಜನೇಯನ ಕುಂಕುಮವನ್ನು ಇಟ್ಟುಕೊಂಡು ಬರುತ್ತಿದ್ದನಂತೆ. ತಮಿಳುನಾಡಿನ ಆಂಜನೇಯ ದೇಗುಲಗಳಿಗೂ ಹೋಗಿ ಬರುತ್ತಿದ್ದನಂತೆ. ನಾಗೇಶ್ ಬಂಧನಕ್ಕಾಗಿ ತೆರಳಿರುವ ಪೊಲೀಸ್ ತಂಡ ಈ ವಿಚಾರವನ್ನು ಗಮನಿಸಿಕೊಂಡು ತನಿಖೆಯನ್ನು ಮಾಡುತ್ತಿದ್ದಾರೆ.
ನಾಗೇಶ್ ಎಟಿಎಂ, ಫೋನ್ ಪೇ ಗೂಗಲ್ ಪೇ ಬಳಸಿಲ್ಲ ..ನಾಗೇಶ್ ತಲೆಮರೆಸಿಕೊಂಡ ಬಳಿಕ ಆತ ಎಲ್ಲಿದ್ದಾನೆ. ಎಟಿಎಂನಲ್ಲಿ ನಗದನ್ನು ವಿಥ್ ಡ್ರಾ ಮಾಡಿದ್ದಾನೆಯೇ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಫೋನ್ ಪೇ ಮತ್ತು ಗೂಗಲ್ ಪೇಯನ್ನು ಬಳಸಿದ್ದಾನೆಯೇ ಎಂಬುದನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿಲ್ಲ.
ಹಣಕ್ಕಾಗಿ ಪೂರ್ವ ನಿಯೋಜಿತ ಪ್ಲಾನ್ ಮಾಡಿದ್ದ ನಾಗೇಶ್..!ಯುವತಿಯ ಮೇಲೆ ಆ್ಯಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರುವುದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಸುಮಾರು 10 ದಿನಗಳ ಹಿಂದೆಯೇ ಪ್ಲಾನ್ ಅನ್ನು ಮಾಡಿಕೊಂಡಿರುವ ಅನುಮಾನವಿದೆ. ಸಂತ್ರಸ್ತ ಯುವತಿಯ ಮನೆಯವರು ತನ್ನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆ್ಯಸಿಡ್ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗ್ತಿದೆ.