ಬೆಂಗಳೂರು:ಭತ್ತದ ಬೆಳೆಗೆ ಕಾಡುತ್ತಿರುವ ಕಂದು ಜಿಗಿಹುಳುವಿನ ಹತೋಟಿಗಾಗಿ ಪೆಸ್ಟಿಸೈಡ್ ಇಂಡಿಯಾ ಕಂಪನಿ ಜಪಾನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಉತ್ಪನ್ನ ಡಿಸ್ಟ್ರಪ್ಟರ್ ಅನ್ನು ಗುರುವಾರ ಕರ್ನಾಟಕದಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಈ ರೀತಿಯ ಆವಿಷ್ಕಾರದ ಮೊದಲ ಉತ್ಪನ್ನ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಪೆಸ್ಟಿಸೈಡ್ ಇಂಡಿಯಾ ಉತ್ಪನ್ನಗಳ ಅಧಿಕೃತ ಮಾರಾಟಗಾರರನ್ನು ಆಹ್ವಾನಿಸಿ ಹೊಸ ಉತ್ಪನ್ನ ಡಿಸ್ಟ್ರಪ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಕಳೆದ ವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಡಿಸ್ಟ್ರಪ್ಟರ್ ಬಿಡುಗಡೆಯಾಗಿದ್ದು, ಮುಂದಿನ ವಾರ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ಗಢದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಪ್ರಕಟಿಸಿದೆ.
ಹೊಸ ಉತ್ಪನ್ನ ಬಿಡುಗಡೆಗೊಳಿಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪೆಸ್ಟಿಸೈಡ್ ಕಂಪನಿ ಸಿಇಒ ಪ್ರಶಾಂತ್ ಹೆಗಡೆ, ಹೊಸ ಉತ್ಪನ್ನ ಬಿಡುಗಡೆ ಮಾಡುತ್ತಿದ್ದೇವೆ. ಭತ್ತದ ಬೆಳೆಯಲ್ಲಿ ರಸ ಹೀರುವ ಕೀಟ ಕಂದು ಜಿಗಿಹುಳು ನಿಯಂತ್ರಣಕ್ಕೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಆರೋಗ್ಯಕರ ಬೆಳೆ ಬರಲು ಸಹಕಾರಿಯಾಗುವ ಜೊತೆಗೆ ಕಂದು ಜಿಗಿಹುಳು ಮೊಟ್ಟೆ ಇಡುವುದನ್ನು ನಿಯಂತ್ರಣ ಮಾಡಲಿದೆ ಎಂದರು.
ಕರ್ನಾಟಕದಲ್ಲಿ ಗುರುವಾರ ಬಿಡುಗಡೆಯಾದ ಉತ್ಪನ್ನವನ್ನ, ಇಂಡಿಯಾ ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೇ ಮೊದಲ ಬಾರಿ ಆಧುನಿಕ ಆವಿಷ್ಕಾರ ಆಧಾರಿತ ಎಕ್ಸ್ ಪಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಡಿಸ್ಟ್ರಪ್ಟರ್ ಸ್ಪರ್ಶ, ಅಂತರ್ ವ್ಯಾಪಿ, ಟ್ರಾನ್ಸ್ ಲ್ಯಾಮಿನಾರ್ ಗುಣಗಳನ್ನು ಹೊಂದಿದೆ. ಈ ರೀತಿ ಅಭಿವೃದ್ಧಿ ಪಡಿಸಿರುವುದು ನಾವೇ ಮೊದಲು, ಮೂರು ವರ್ಷದಿಂದ ಪ್ರಯೋಗ ನಡೆಸಿದ್ದೇವೆ. ಈ ಉತ್ಪನ್ನ ಬಳಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಇಳುವರಿ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.