ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಮ್ಮೆಯ ವಿಶ್ವ ವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸರಳವಾಗಿ ದೇವಸ್ಥಾನದೊಳಗೆ ಎಲ್ಲ ಕಾರ್ಯಗಳು ನಡೆದಿದೆ. ಅದ್ಧೂರಿಯಾಗಿ ಇಡೀ ತಿಗಳರ ಸಮುದಾಯ ಭಾಗಿಯಾಗಿ ಜಾತ್ರೆಯಂತೆ ಆಚರಿಸುತ್ತಿದ್ದ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿತ್ತು.
ಸದ್ಯ ಮೂರನೇ ಅಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆ ಆಗುತ್ತಿರುವ ದೃಷ್ಟಿಯಿಂದ ಬೆಂಗಳೂರು ಕರಗ ಮಹೋತ್ಸವವನ್ನ ಸಾರ್ವಜನಿಕವಾಗಿ ನಡೆಸಲು ಅನುಮತಿ ಕೊಡುವಂತೆ ಮನವಿ ಮಾಡಲಾಗಿದೆ.
ಶಾಸಕ ಪಿ. ಆರ್. ರಮೇಶ್, ಸರ್ಕಾರಕ್ಕೆ ಪತ್ರವನ್ನ ಬರೆದಿದ್ದು, ರಾಜ್ಯದಲ್ಲಿ ಕೊರೊನಾ ರೋಗ ಉಲ್ಬಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದಿನ ನೂರಾರು ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಆಚರಿಸಿಕೊಂಡು ಬಂದಂತಹ ಹಲವು ದೈವ ಜಾತ್ರೆಗಳನ್ನು ನಿರ್ಬಂಧಿಸಿ ಸರ್ಕಾರವೂ ಆದೇಶಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಲವು ದೇವತಾಕಾರ್ಯಗಳು ಕಳೆದೆರಡು ವರ್ಷಗಳಿಂದ ಸ್ತಬ್ಧವಾಗಿವೆ.
ಸುಮಾರು 15 ರಿಂದ 16 ಜಿಲ್ಲೆಯಲ್ಲಿ 140 ಕ್ಕೂ ಹೆಚ್ಚು ಧರ್ಮರಾಯ ಸ್ವಾಮಿ, ದ್ರೌಪದಮ್ಮ ದೇವಿಯ ಕರಗ ಉತ್ಸವಗಳು ನಡೆದುಕೊಂಡು ಬಂದಿದೆ. ಕೋವಿಡ್ ಕಾರಣಕ್ಕೆ ಸರ್ಕಾರ ನಿರ್ಬಂಧಿಸಿದ ಹಿನ್ನಲೆಯಲ್ಲಿ ಯಾವುದೇ ಜಾತ್ರೆ ,ಕರಗಗಳು ಸಾರ್ವಜನಿಕವಾಗಿ ನಡೆಯುತ್ತಿಲ್ಲ. ಅದರಲ್ಲೂ ಬೆಂಗಳೂರು ನಗರದಲ್ಲಿ ನೂರಾರು ವರ್ಷಗಳಿಂದ ವಿಶ್ವವಿಖ್ಯಾತ ಐತಿಹಾಸಿಕ ಕರಗ ಉತ್ಸವ ಆಚರಿಸುತ್ತಾ ಬರಲಾಗಿದೆ. ನಗರದ ಕಲ್ಯಾಣ ಹಾಗೂ ಜನಜೀವನ ಸಮೃದ್ಧಿಯಾಗಿ ಇರಲು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯಲಿದೆ.