ಬೆಂಗಳೂರು :ದಶಕಗಳಿಂದಲೂ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 2004 ರಿಂದ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ರಾಜಕಾರಣಿಯಾಗಿದ್ದ ದಿ. ಸಿ.ಕೆ. ಜಾಫರ್ ಶರೀಫ್ ಸತತವಾಗಿ ಗೆದ್ದು ಬಂದು ಈ ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರ ಕೋಟೆಯನ್ನಾಗಿ ಮಾಡಿದ್ದರು. ಆದರೆ 2004ರಲ್ಲಿ ಕಾಂಗ್ರೆಸ್ನ ಭದ್ರಕೋಟೆಯನ್ನು ಬಿಜೆಪಿ ಭೇದಿಸಿತ್ತು. 2004 ರಲ್ಲಿ ಡಿ.ವಿ. ಸದಾನಂದಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಸಿ.ನಾರಾಯಣ ಸ್ವಾಮಿ ಅವರನ್ನು ಸೋಲಿಸಿದರು. ಇದಾದ ನಂತರ ಸತತವಾಗಿ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ.
2004ರ ನಂತರ ಬಿಜೆಪಿಯಿಂದ ಸದಾನಂದಗೌಡ ಎರಡು ಬಾರಿ ಮತ್ತು ಡಿ.ಬಿ. ಚಂದ್ರೇಗೌಡ ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಸಿ. ನಾರಾಯಣಸ್ವಾಮಿ ಅವರು ಎರಡು ಬಾರಿ ಸೋತಿದ್ದರೆ, ಸಿ.ಕೆ. ಜಾಫರ್ ಶರೀಫ್ ಒಂದು ಬಾರಿ ಸೋತಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚು ಎಂದು ಹೇಳಲಾಗುತ್ತಿದೆ.
ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಬ್ಯಾಟರಾಯನಪುರ, ಹೆಬ್ಬಾಳ, ಕೆ.ಆರ್. ಪುರ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಪುಲಿಕೇಶಿನಗರ (ಮೀಸಲು), ಯಶವಂತಪುರ ಹಾಗೂ ಮಲ್ಲೇಶ್ವರಂ. ಐದು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದು, ಒಂದು ಕ್ಷೇತ್ರ ಬಿಜೆಪಿ ಹಾಗೂ ಎರಡು ಕ್ಷೇತ್ರ ಜೆಡಿಎಸ್ ಕೈಯಲ್ಲಿವೆ.
ಜಾತಿವಾರು ಲೆಕ್ಕಾಚಾರ? :
ಕುರುಬ, ಪರಿಶಿಷ್ಟ ಜಾತಿ ಸೇರಿದಂತೆ ಇತರ ಜಾತಿಗಳ ಸುಮಾರು 6 ಲಕ್ಷ ಮತಗಳಿವೆ ಎನ್ನಲಾಗುತ್ತಿದೆ. ಅದೇ ರೀತಿ ಒಕ್ಕಲಿಗ ಸಮುದಾಯದ ಮತಗಳು ಸುಮಾರು 7 ಲಕ್ಷದಷ್ಟಿವೆ ಎಂದು ಅಂದಾಜಿಸಲಾಗಿದೆ. ಮುಸ್ಲಿಂ ಸಮುದಾಯದ ಸುಮಾರು 5 ಲಕ್ಷ ಮತಗಳಿವೆ. ಆದರೆ ಸರಿಯಾದ ಜಾತಿ ಲೆಕ್ಕಾಚಾರ ಎಲ್ಲಿಯೂ ಲಭ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ, ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತಗಳೇ ಉತ್ತರ ಕ್ಷೇತ್ರದ ಫಲಿತಾಂಶವನ್ನು ನಿರ್ಧರಿಸುತ್ತವೆ.
ಈ ಕ್ಷೇತ್ರದಲ್ಲಿ 24,01,472 ಮತದಾರರಿದ್ದು, ಇದರಲ್ಲಿ ಶೇ. 52.48 ರಷ್ಟು ಪುರುಷ ಮತದಾರರಿದ್ದರೆ, ಶೇ. 47. 67 ರಷ್ಟು ಮಹಿಳೆಯರಿದ್ದಾರೆ. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ 13,57,553 ಮತದಾರರು ಮತವನ್ನು ಚಲಾಯಿಸಿದ್ದು, ಶೇ. 56.53ರಷ್ಟು ಮತದಾನವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಡಿ.ವಿ. ಸದಾನಂದಗೌಡರು 7,18,326 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಸಿ. ನಾರಾಯಣಸ್ವಾಮಿ ಅವರು 4,88, 562 ಮತ ಪಡೆದಿದ್ದರು.
ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ವರಿಷ್ಠರು ಈ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟರು.