ಬೆಂಗಳೂರು: ರಾಜ್ಯದಲ್ಲಿ ಅದೆಷ್ಟೂ ಮಕ್ಕಳು ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಕಾರಣಗಳಿಗೆ ವಿದ್ಯಾರ್ಥಿಗಳು ಶಾಲೆಗಳನ್ನು ತೊರೆಯುತ್ತಿದ್ದಾರೆ. ಅದರಲ್ಲೂ ಕೋವಿಡ್ ಲಾಕ್ಡೌನ್ ನಿಂದ ಭೌತಿಕ ತರಗತಿಗಳು ರದ್ದು ಮಾಡುತ್ತಿರುವುದರಿಂದ ಹಲವು ವಿದ್ಯಾರ್ಥಿಗಳು ಶಾಲೆ ತೊರೆಯುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಹೀಗೆ ಶಾಲೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ವಾಪಸು ಕರೆತರುವುದರಲ್ಲಿ ಶಿಕ್ಷಣ ಇಲಾಖೆ ಹಿಂದೆ ಬಿದ್ದಿದೆ.
ಕೋವಿಡ್ ಲಾಕ್ಡೌನ್ ಜನರ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ವಲಸೆ ಬಂದ ಕಾರ್ಮಿಕರ ಮಕ್ಕಳು ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಕೊರೊನಾ ನಂತರ ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳನ್ನು ಶಾಲೆಬಿಡಿಸಿ ಕೂಲಿ ಕೆಲಸಕ್ಕೆ ಪೋಷಕರು ಸೇರಿಸಿರುವ ಪ್ರಕರಣಗಳೂ ಹೆಚ್ಚಿವೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2021-22 ಸಾಲಿನಲ್ಲೂ ಮಕ್ಕಳು ಶಾಲೆ ತೊರೆದ ಪ್ರಮಾಣ ಗಣನೀಯವಾಗಿದೆ.
2021-22ರಲ್ಲಿ ಶಾಲೆ ತೊರೆದ ವಿದ್ಯಾರ್ಥಿಗಳೆಷ್ಟು?:
ಶಿಕ್ಷಣ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಈ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ಒಟ್ಟು 34,411 ವಿದ್ಯಾರ್ಥಿಗಳು ಶಾಲೆ ತೊರೆದ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ 6-14 ವಯೋಮಾನದ 19,336 ಮಕ್ಕಳು ಶಾಲೆ ತೊರೆದಿದ್ದಾರೆ. ಇನ್ನು 14-16 ವಯೋಮಾನದ 15,075 ವಿದ್ಯಾರ್ಥಿಗಳು ಶಾಲೆಯಿಂದ ಹೊರ ಗುಳಿದಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 6608 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಬೀದರ್ 2609, ಬಳ್ಳಾರಿಯಲ್ಲಿ 1279, ಕಲಬುರ್ಗಿಯಲ್ಲಿ 2129 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.
ರಾಯಚೂರಿನಲ್ಲಿ 1,966, ಚಿತ್ರದುರ್ಗ 1587, ಧಾರವಾಡ 1463, ಬೆಳಗಾವಿಯಲ್ಲಿ 1265, ಕೊಪ್ಪಳ 1159, ಶಿವಮೊಗ್ಗ 1046, ವಿಜಯಪುರ 1152, ಯಾದಗಿರಿಯಲ್ಲಿ 1608 ಮಕ್ಕಳು ಶಾಲೆ ತೊರೆದಿರುವುದು ವರದಿಯಾಗಿದೆ.