ಕರ್ನಾಟಕ

karnataka

ETV Bharat / state

ಪರಿಷತ್​ ಸಭಾಪತಿ ವಿರುದ್ಧ ಅವಿಶ್ವಾಸ: ಅಧಿವೇಶನದಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿಯಿಂದ ಪ್ಲಾನ್​ -ಬಿ ತಂತ್ರ

ವಿಧಾನ ಪರಿಷತ್​ ಸಭಾಪತಿಗಳನ್ನು ಕೆಳಗಿಳಿಸುವ ಬಿಜೆಪಿ ಪ್ರಯತ್ನಕ್ಕೆ ಕೊಂಚಮಟ್ಟಿನ ಹಿನ್ನಡೆಯಾದರೂ, ಬಿಜೆಪಿ ತನ್ನ ಪ್ರಯತ್ನ ಬಿಡದಿರಲು ನಿರ್ಧರಿಸಿದೆ. ಈ ಹಿನ್ನೆಲೆ ಇಂದು ಬೆಳಗ್ಗೆ 10.30ಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ.

By

Published : Dec 11, 2020, 6:54 AM IST

no confidence motion against  pratap chandra shetty
ಅವಿಶ್ವಾಸ ನಿರ್ಣಯ

ಬೆಂಗಳೂರು: ಶತಾಯಗತಾಯ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಗೆಲ್ಲುವ ಪ್ರಯತ್ನ ನಡೆಸಿದ್ದ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ತಮ್ಮ ಹಿಡಿತವನ್ನು ಸಾಧಿಸಲು ಬಿಜೆಪಿ ಪ್ಲಾನ್-ಬಿ ತಂತ್ರಕ್ಕೆ ಮುಂದಾಗಿದೆ.

ಚಳಿಗಾಲದ ಅಧಿವೇಶನ ನಡೆಸಿ ಹೇಗಾದರೂ ಸಭಾಪತಿಗಳನ್ನು ಕೆಳಗಿಳಿಸುವ ಬಿಜೆಪಿ ಪ್ರಯತ್ನಕ್ಕೆ ಕೊಂಚಮಟ್ಟಿನ ಹಿನ್ನಡೆಯಾದರೂ, ಪ್ರಯತ್ನ ಬಿಡದಿರಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಮತ್ತೊಂದು ಪ್ರಯತ್ನವಾಗಿ ರಾಜಭವನದ ಮೆಟ್ಟಿಲೇರಲು ಮುಂದಾಗಿದೆ. ಇದಕ್ಕೂ ಮುನ್ನ ಪಕ್ಷದ ಸದಸ್ಯರ ವಿಶ್ವಾಸ ಪಡೆಯುವ ಉದ್ದೇಶದಿಂದ ಇಂದು ಬೆಳಗ್ಗೆ 10.30ಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಎಲ್ಲ ಸದಸ್ಯರು ಹಾಜರಿರುವಂತೆ ಸೂಚಿಸಲಾಗಿದೆ.

ಮಂಗಳವಾರದವರೆಗೆ ಅಧಿವೇಶನ ನಡೆದರೆ ತಮಗಿರುವ ಕಾಲಾವಧಿ ಪೂರ್ಣಗೊಳ್ಳಲಿದೆ. ಅನಾಯಾಸವಾಗಿ ತಮ್ಮ ಪದಚ್ಯುತಿಗೆ ಬಿಜೆಪಿ ತಂತ್ರ ರೂಪಿಸಲಿದೆ ಎಂಬುದನ್ನು ಅರಿತ ಪ್ರತಾಪ್ ಚಂದ್ರ ಶೆಟ್ಟಿ, ನಿನ್ನೆ ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಯಾವುದೇ ನಿರ್ಧಾರ ತಿಳಿಸದೇ ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಮುಂದಿನ ಅಧಿವೇಶನ ಜನವರಿಯಲ್ಲಿ ನಡೆಯುವ ಸಾಧ್ಯತೆಯಿದ್ದು, ಅಲ್ಲಿಯವರೆಗೂ ತಮ್ಮ ಸ್ಥಾನ ಕಾಪಾಡಿಕೊಳ್ಳುವಲ್ಲಿ ತಾತ್ಕಾಲಿಕ ಯಶಸ್ಸು ಕಂಡಿದ್ದಾರೆ. ಆದರೆ ಬಿಜೆಪಿ ತನ್ನ ಪ್ರಯತ್ನವನ್ನು ಇಲ್ಲಿಗೆ ಬಿಡದೆ ರಾಜ್ಯಪಾಲರ ಮೂಲಕ ಆಶಯ ಈಡೇರಿಸಿಕೊಳ್ಳಲು ಮುಂದಾಗಿದೆ. ರಾಜ್ಯಪಾಲರನ್ನು ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿ ವಿಧಾನ ಪರಿಷತ್ ಅಧಿವೇಶನ ಮುಂದುವರಿಸುವಂತೆ ಇಲ್ಲವೇ ಇನ್ನೊಮ್ಮೆ ಹೊಸದಾಗಿ ಅಧಿವೇಶನ ಕರೆಯುವಂತೆ ಒತ್ತಾಯಿಸಬೇಕು ಎಂದು ಮನವಿ ಮಾಡಿದೆ. ಇದರ ಜೊತೆ ಇನ್ನಾವುದಾದರೂ ಪರ್ಯಾಯ ಮಾರ್ಗ ಸಿಗುತ್ತದೆಯೇ ಎನ್ನುವುದನ್ನು ಕೂಡ ಹುಡುಕುತ್ತಿರುವ ಬಿಜೆಪಿ ನಾಯಕರು ತಜ್ಞರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಸಾರ್ವಜನಿಕರ ಗಮನಕ್ಕೆ: ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರೋದಿಲ್ಲ

ರಾಜ್ಯಪಾಲರಿಗೆ ಮಾಹಿತಿ:
ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿ 14 ದಿನಗಳು ಕಳೆದರೂ ಸಭಾಪತಿಯವರು ಚರ್ಚೆಗೆ ಎತ್ತಿಕೊಳ್ಳದ ಬಗ್ಗೆ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ರಾಜ್ಯಪಾಲರು ಅಡ್ವೊಕೇಟ್‌ ಜನರಲ್‌ ಅವರಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದರು. ಈ ನಡುವೆಯೇ ಸಭಾಪತಿಯವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎಂಬ ಮಾಹಿತಿಯನ್ನು ಆಯನೂರು ಮಂಜುನಾಥ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿ ಪ್ಲಾನ್-ಬಿ ಉಪಯೋಗಿಸಿಕೊಂಡು ಸಭಾಪತಿಗಳನ್ನು ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದೆ.

ರಾಜ್ಯಪಾಲರಿಗೆ ಮಾಹಿತಿ

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಸೇರಿ 11 ಸದಸ್ಯರು ಸಭಾಪತಿ ವಿರುದ್ಧ ನ. 25ರಂದು ಅವಿಶ್ವಾಸ ನಿರ್ಣಯ ನೋಟಿಸ್‌ ನೀಡಿದ್ದರು. ‘ಬುಧವಾರಕ್ಕೆ 14 ದಿನ ಮುಗಿದರೂ, ಪರಿಷತ್‌ ಕಾರ್ಯಕಲಾಪದ ನಿಯಮಾವಳಿಗಳ ಪ್ರಕಾರ ನೋಟಿಸ್‌ ನೀಡಿದ 14 ದಿನಗಳ ತರುವಾಯ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂಬ ನಿಯಮವಿದೆ. ಹೀಗಾಗಿ, ಗುರುವಾರ ಬೇಕಿದ್ದರೆ ಚರ್ಚೆಗೆ ಎತ್ತಿಕೊಳ್ಳಬಹುದು ಎಂದು ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದ್ದರು. ಈ ಮಧ್ಯೆ, 'ನೋಟಿಸ್‌ ಬಗ್ಗೆ ನನಗೆ ಅನುಮಾನಗಳಿವೆ. ಕಾನೂನು ತಜ್ಞರ ಸಲಹೆ ಪಡೆದ ಬಳಿಕ ಯಾವಾಗ ಚರ್ಚೆಗೆ ಎತ್ತಿಕೊಳ್ಳಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಬುಧವಾರ ಸದನದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದ್ದರು.

ಒಟ್ಟಾರೆ ಈ ಎಲ್ಲ ಬೆಳವಣಿಗೆಗಳ ನಡುವೆ ವಿಧಾನ ಪರಿಷತ್ ಕಲಾಪ ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಮುಂದಿನ ಅಧಿವೇಶನದಲ್ಲಿ ಸಭಾಪತಿಗಳ ಪದಚ್ಯುತಿ ನಿರ್ಣಯ ಮಂಡನೆಯಾಗುತ್ತಾ ಅಥವಾ ಅಷ್ಟರೊಳಗೆ ಬಿಜೆಪಿ ನಡೆಸುವ ಪ್ರಯತ್ನಕ್ಕೆ ಸಭಾಪತಿಗಳು ತಮ್ಮ ಸ್ಥಾನ ಬಿಟ್ಟುಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details