ಬೆಂಗಳೂರು:ನನಗೆ ಯಾವುದೇ ಸ್ಥಾನ ಮಾನ ಮುಖ್ಯವಲ್ಲ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ನೂತನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಜೆಡಿಎಸ್ ಯುವ ಘಟಕದ ನೂತನ ರಾಜ್ಯಾಧ್ಯಕ್ಷನಾಗಿ ನಿಖಿಲ್ ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಪಕ್ಷದ ಕಚೇರಿಯಲ್ಲಿ ಇಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಪಕ್ಷದ ಬಾವುಟ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿದ ನಿಖಿಲ್, ದೇವೇಗೌಡರು ಪಕ್ಷ ಸಂಘಟನೆಗೆ ನಿರಂತರವಾಗಿ ದುಡಿಯುತ್ತಿದ್ದಾರೆ. ಅದೇ ಹಾದಿಯಲ್ಲಿ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.
ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂಬ ಭರವಸೆಯಿಂದ ಈ ಸ್ಥಾನವನ್ನು ನನಗೆ ನೀಡಲಾಗಿದೆ. ಅದನ್ನು ಉಳಿಸಿಕೊಂಡು ಹೋಗುತ್ತೇನೆ. ನನಗೆ ಸಿಕ್ಕಿರುವ ಸ್ಥಾನವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ನಿಖಿಲ್ ಇದೇ ವೇಳೆ ಭರವಸೆ ನೀಡಿದರು.
ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ನಾನು ಸುದ್ದಿಗೋಷ್ಠಿ ಮಾಡಲು ಹೋಗಿರಲಿಲ್ಲ. ನನ್ನ ಫೇಸ್ಬುಕ್ ಪೇಜ್ನಲ್ಲಿ ಇದರ ಬಗ್ಗೆ ಹಾಕಿಕೊಂಡಿದ್ದೇ. ನನಗೆ ಮತ ಹಾಕಿದ ಮಂಡ್ಯ ಜಿಲ್ಲೆಯ ಎಲ್ಲಾ ಮತದಾರರಿಗೂ ನಾನು ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ಐದು ಮುಕ್ಕಾಲು ಲಕ್ಷ ಮತದಾರರು ನನ್ನ ಪರ ಇದ್ದಾರೆ. ನನ್ನ ವಿರುದ್ಧ ಮತ ಚಲಾಯಿಸಿದವರ ಮನ ಗೆಲ್ಲುವ ಪ್ರಯತ್ನ ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು.
ಇನ್ನೂ ನನ್ನನ್ನು ಚುನಾವಣೆಗೆ ನಿಲ್ಲಿಸಿ ಹಾಳು ಮಾಡಿಬಿಟ್ರಿ ಎಂದು ದೇವೇಗೌಡರನ್ನು ನಾನು ನಿಂದಿಸಿರುವುದಾಗಿ ಸುಳ್ಳು ಸುದ್ದಿ ಹಬ್ಬಿತ್ತು. ಇದು ಬಹಳ ನೋವನ್ನುಂಟು ಮಾಡಿತು ಎಂದು ಹೇಳಿದರು.