ಬೆಂಗಳೂರು: ಕಾನೂನಾತ್ಮಕ ಹಾಗೂ ಕಾನೂನು ಬಾಹಿರ ಗಣಿಗಾರಿಕೆ ವಿಚಾರವಾಗಿ ಸಂಬಂಧಿಸಿದವರ ಜತೆ ಪ್ರತಿ 15 ದಿನಕ್ಕೊಮ್ಮೆ ಗಣಿ ಅದಾಲತ್ ನಡೆಸಲು ತೀರ್ಮಾನಿಸಿದ್ದೇವೆ ಎಂದು ಗಣಿ, ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈನಿಂಗ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಯಾವುದೇ ಕೈಗಾರಿಕೆಗೆ ಪೂರಕವಾಗಿ ಇದು ಬೇಕು. ಅದಕ್ಕಾಗಿ ಸೂಕ್ತವಾಗಿ ಗಣಿಗಾರಿಕೆ ನಡೆಸಬೇಕಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಐದು ವಿಭಾಗಗಳಲ್ಲಿ ಸಭೆ ನಡೆಸುತ್ತೇವೆ. ಪ್ರತಿ 15 ದಿನಕ್ಕೆ ಒಂದು ವಿಭಾಗದಲ್ಲಿ ಸಭೆ ನಡೆಯಲಿದೆ. ವಿಧಾನ ಮಂಡಲ ಅಧಿವೇಶನ ಮುಕ್ತಾಯದ ನಂತರ ಈ ಅದಾಲತ್ ಆರಂಭಿಸುತ್ತೇವೆ. ಸ್ಥಳೀಯ ಅಧಿಕಾರಿಗಳ ಜತೆ ಚರ್ಚಿಸಿ ಸ್ಥಳೀಯವಾಗಿ ಇರುವ ಸಮಸ್ಯೆ ಪರಿಹರಿಸುತ್ತೇವೆ. ವ್ಯವಸ್ಥಿತ ಗಣಿಗಾರಿಕೆ ಮೂಲಕ ರಾಜ್ಯದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.
ಗಣಿ ತರಬೇತಿ ಕೇಂದ್ರಕ್ಕೆನಮ್ಮಲ್ಲಿಯೂ ಜಾಗ ಹಾಗೂ ವ್ಯವಸ್ಥೆ ಇರುವ ಹಿನ್ನೆಲೆ ಗಣಿಗಾರಿಕೆ ಶಾಲೆ ಆರಂಭಿಸಲು ತೀರ್ಮಾನಿಸಿದ್ದೇವೆ. ಬೇರೆ ಬೇರೆ ರಾಜ್ಯದಲ್ಲಿ ಇಂತಹ ತರಬೇತಿ ಕೇಂದ್ರ ಇದೆ. ಜಾರ್ಖಂಡ್ನಲ್ಲಿ ಒಂದು ತರಬೇತಿ ಕೇಂದ್ರ ಇದ್ದು, ಮುಂದಿನ ದಿನಗಳಲ್ಲಿ ಸಿಎಂ ಜತೆ ಚರ್ಚಿಸಿ ಸಮಯ, ಸ್ಥಳ ನಿರ್ಧರಿಸುತ್ತೇವೆ. ಬೆಂಗಳೂರು ಹೊರತುಪಡಿಸಿ ಬೇರೆ ಜಾಗದಲ್ಲಿ ಮಾಡುವುದಾದರೆ ನಮ್ಮದೇ ಜಾಗದಲ್ಲಿ ಮಾಡುತ್ತೇವೆ. ಆದಷ್ಟು ಶೀಘ್ರ ಇದರ ರೂಪುರೇಷೆ ಸಿದ್ಧಪಡಿಸುತ್ತೇವೆ. ಇದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹದ್ದಿನಪಡೆ ಎಂಬ ಗಣಿ ಇದ್ದು, ಅಲ್ಲಿ ಅಗತ್ಯ ಭೂಮಿಯ ಗಣಿಗಾರಿಕೆ ಮುಗಿದಿದೆ. ಇನ್ನೊಂದು ಭಾಗದಿಂದ ಗಣಿಗಾರಿಕೆ ಆರಂಭಿಸುವ ಅವಕಾಶ ಇದ್ದು, ಅದು ಸರ್ಕಾರಿ ಜಾಗವಾಗಿದೆ. ಈ ಕುರಿತು ಸಿಎಂ ಜತೆ ಚರ್ಚಿಸಿ ಬಳಿಕ ಗಣಿಗಾರಿಕೆ ಆರಂಭಿಸುವ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಓದಿ:ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ ಬಮೂಲ್.. ಲೀಟರ್ಗೆ 2 ರೂಪಾಯಿ ಏರಿಕೆ..
ಅಕ್ರಮ ಗಣಿಗಾರಿಕೆ ನಡೆಯುವುದು ನಮ್ಮ ಗಮನಕ್ಕೆ ಬಂದಿದೆ. ನಾಳೆ ವಿಧಾನಸೌಧದಲ್ಲಿ ಜಿಲ್ಲಾವಾರು ಅಧಿಕಾರಿಗಳ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚಿಸಿದ ಬಳಿಕ ಮಾಹಿತಿ ನೀಡುತ್ತೇನೆ. ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳುತ್ತೇವೆ. ಗಣಿಗಾರಿಕೆ ಅಕ್ರಮ ತಡೆಯುವ ಕಾರ್ಯ ಮಾಡುತ್ತೇವೆ. ವ್ಯವಸ್ಥಿತವಾಗಿ ತನಿಖೆ ನಡೆಸಿ ಐದು ಪಟ್ಟು ದಂಡ ವಿಧಿಸುವ ಅವಕಾಶ ಇದೆ. ಮುಂದಿನ ದಿನಗಳಲ್ಲಿ ಕಾನೂನಿನಲ್ಲಿ ಸಹ ಅಗತ್ಯ ಬದಲಾವಣೆ ತರಲು ಬಯಸುತ್ತೇವೆ ಎಂದರು.
ಶಿವಮೊಗ್ಗ ಘಟನೆ ಮತ್ತೆಲ್ಲೂ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಜಿಲ್ಲಾ ಮುಖಂಡರು, ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಹೆಚ್ಚಿರುವ ಕಡೆ ನಿಯೋಜಿಸಿ ತನಿಖೆ ನಡೆಸುತ್ತೇವೆ. ಘಟನೆಯಲ್ಲಿ ಸುಮಾರು 6 ಮಂದಿ ಮೃತಪಟ್ಟಿದ್ದು, ಗಣಿ ಮಾಲೀಕರಿಂದ ಹೆಚ್ಚಿನ ಪರಿಹಾರ ಕೊಡಿಸುವ ಕಾರ್ಯ ಮಾಡುತ್ತಿದ್ದೇವೆ. ಕೇಸ್ಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಅಕ್ರಮ ಗಣಿಗಾರಿಕೆಯನ್ನು ಕಾನೂನಿನ ಅಡಿ ಸಕ್ರಮಗೊಳಿಸುವ ಕುರಿತು ವಿಚಾರಣೆ ಹಂತದಲ್ಲಿದೆ. ಯಾವುದೇ ರೀತಿ ಅಕ್ರಮ ಗಣಿಗಾರಿಕೆ ಸಕ್ರಮ ಮಾಡಲ್ಲ. ಸಿಎಂ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಗಣಿಗಾರಿಕೆ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಅದು ಸತ್ಯವಾದರೆ ತನಿಖೆಯಿಂದ ಬಯಲಾಗಲಿದೆ ಎಂದು ತಿಳಿಸಿದರು.