ಬೆಂಗಳೂರು: ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವೆಬಿನಾರ್ ಆಯೋಜಿಸಿದ್ದರು. ಈ ವೇಳೆ ಹಲವು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಸರ್ಕಾರವು ತೆಗೆದುಕೊಳ್ಳಬಹುದಾದ ಪ್ರಾಯೋಗಿಕ ಕ್ರಮಗಳ ಬಗ್ಗೆ ಅಭಿಪ್ರಾಯ ಕ್ರೋಢೀಕರಣ ಅಭಿಯಾನದ ಮುಂದುವರೆದ ಭಾಗವಾಗಿದೆ ಅಂತ ಸಚಿವರು ಹೇಳಿದರು.
ಸಚಿವ ಸುರೇಶ್ ಕುಮಾರ್ ವೆಬಿನಾರ್ ಶೈಕ್ಷಣಿಕ ವಾತಾವರಣವನ್ನ ಉತ್ತಮಪಡಿಸಲು ಈ ಎಲ್ಲಾ ಸಂಸ್ಥೆಗಳು ಸಮಾಜದೊಂದಿಗೆ ಸಮರ್ಪಣಾ ಮನೋಭಾವದಿಂದ ಕೈಜೋಡಿಸಿರುವ ರೀತಿ ಇಂತಹ ಸಂಕಷ್ಟದ ಸ್ಥಿತಿಗತಿಯ ಸಂದರ್ಭದಲ್ಲಿ ಅತ್ಯಂತ ಪ್ರೇರಣೆ ನೀಡುವ ವಿಷಯ ಎಂದು ಸಚಿವರು ಅಭಿಪ್ರಾಯಪಟ್ಟರು. ಶಿಕ್ಷಕರ ತರಬೇತಿ, ವಠಾರ ಶಾಲೆ, ವಿದ್ಯಾರ್ಥಿಯ ಕಲಿಕಾ ಸ್ವಾವಲಂಬನೆ, ಚಟುವಟಿಕೆಯ ಆಧಾರಿತವಾದ ಕಲಿಕೆ, ತಂತ್ರಜ್ಞಾನಾಧಾರಿತ ಕಲಿಕೆಯ ಪ್ರೇರೇಪಣೆ, ಗಣಿತ ಕಲಿಕಾ ಆಂದೋಲನ, ಶಿಕ್ಷಣ ಬ್ಯಾಂಕ್ ಸ್ಥಾಪನೆಗೆ ಆಗ್ರಹ ಹೀಗೆ ಹತ್ತಾರು ವಿನೂತನ ಆಲೋಚನೆಗಳು ಚರ್ಚೆಯಾದವು.
ಸ್ಥಳೀಯ ಅವಶ್ಯಕತೆಗನುಗುಣವಾದ ಕಲಿಕೆ, ವಿದ್ಯಾರ್ಥಿ, ಶಿಕ್ಷಕ, ಪೋಷಕ ಸಮುದಾಯದ ಜೊತೆಗಿನ ಆರೋಗ್ಯಕರವಾದ ಭಾವನಾತ್ಮಕ ಸಂಬಂಧದ ಅಗತ್ಯತೆ ಹೀಗೆ ವಿಶಿಷ್ಟ ಹಾಗೂ ಇಂದಿನ ಸನ್ನಿವೇಶಕ್ಕೆ ಅತ್ಯಗತ್ಯವಾದ ಸಲಹೆ ಅಭಿಪ್ರಾಯಗಳು ಕೇಳಿ ಬಂದವು.
ಗ್ರಾಮ್ಸ್, ಅಕ್ಷರ ಫೌಂಡೇಶನ್, ಪ್ರಥಮ್, ಅಜೀಂ ಪ್ರೇಮ್ ಜಿ ಫೌಂಡೇಶನ್, ಅಗಸ್ತ್ಯ ಫೌಂಡೇಶನ್, ದೀಕ್ಷಾ, ಯುನಿಸೆಫ್ ಸೇರಿದಂತೆ ಸುಮಾರು 30 ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಚರ್ಚೆಯಲ್ಲಿ ಹಿರಿಯ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ, ಡಾ ಎಂ.ಕೆ.ಶ್ರೀಧರ್, ಡಾ. ವಿ.ಪಿ.ನಿರಂಜನಾರಾಧ್ಯ, ಹೃಷಿಕೇಶ್, ನಿಮ್ಹಾನ್ಸ್ ವೈದ್ಯರಾದ ಡಾ. ಜಾನ್ ವಿಜಯ್ ಸಹ ಹಾಜರಾಗಿದ್ದರು.