ಕರ್ನಾಟಕ

karnataka

By

Published : Jun 2, 2020, 4:30 PM IST

ETV Bharat / state

ಜೆಡಿಎಸ್​ ಭದ್ರಕೋಟೆ ಛಿದ್ರವಾಗಿದೆ; ಇನ್ಮುಂದೆ ನೀವೇ ನೋಡುತ್ತೀರಿ: ನಾರಾಯಣ ಗೌಡ

ಜೆಡಿಎಸ್​ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಮಂಡ್ಯದಲ್ಲಾದ ರಾಜಕೀಯ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ನಾರಾಯಣ ಗೌಡ, ಮುಂದೆ ಎಲ್ಲವನ್ನೂ ನೀವೇ ನೋಡುತ್ತೀರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Minister Narayana Gowda Reaction About JDS Party
ತೋಟಗಾರಿಕಾ ಸಚಿವ ನಾರಾಯಣಗೌಡ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್​ನ ಭದ್ರಕೋಟೆ ಒಡೆದು ಹೋಗಿದೆ. ಇನ್ಮುಂದೆ ನೀವೇ ನೋಡುತ್ತೀರಿ ಎಂದು ಮಾಜಿ ಪಕ್ಷಕ್ಕೆ ತೋಟಗಾರಿಕಾ ಸಚಿವ ನಾರಾಯಣ ಗೌಡ ಟಾಂಗ್ ನೀಡಿದ್ದಾರೆ.

ಮಂಡ್ಯಕ್ಕೆ ಜೆಡಿಎಸ್​ನಿಂದ ಬಂದಿರುವ ನಾರಾಯಣ ಗೌಡ ಉಸ್ತುವಾರಿಯಾಗಿದ್ದಾರೆ. ಇದೀಗ ಹಾಸನಕ್ಕೂ ಜೆಡಿಎಸ್​ ತೊರೆದು ಬಿಜೆಪಿ ಸೇರಿರುವ ಗೋಪಾಲಯ್ಯಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಾರೆ. ಇದು ಜೆಡಿಎಸ್​ ಕೋಟೆ ಛಿದ್ರಪಡಿಸುವ ತಂತ್ರವೇ ಎನ್ನುವುದಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಕೋಟೆ ಎಲ್ಲಿದೆ? ಈಗಾಗಲೇ ಒಡೆದು ಹೋಗಿದೆ, ಮುಂದೆ ನೋಡುತ್ತೀರಿ ಎಂದು ಮಾರ್ಮಿಕವಾಗಿ ನುಡಿದರು.

ಇನ್ಮುಂದೆ ನೋಡುತ್ತೀರಿ ಎಂದರೆ?

ಮುಂದೆ ಒಳ್ಳೆಯಯಾಗಲಿದೆ ಎಂದು ಅರ್ಥ, ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ಯಾರಿಗೂ ತೊಂದರೆಯಾಗದಂತೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣ ಗೌಡ ಸರ್ಕಾರವನ್ನು ಸಮರ್ಥಿಸಿಕೊಂಡರು.

ನಾರಾಯಣಗೌಡ ಯಡವಟ್ಟು:

ಮಾತಿನ ಗಡಿಬಿಡಿಯಲ್ಲಿ ನಮ್ಮ ಮುಖ್ಯಮಂತ್ರಿ ದಿನದ 14 ಗಂಟೆ ಕೆಲಸ ಮಾಡುತ್ತಾರೆ ಎನ್ನುವ ಬದಲು ನಿದ್ದೆ ಮಾಡುತ್ತಾರೆ ಎಂದ ಸಚಿವ ನಾರಾಯಣಗೌಡ, ಸಿಎಂ ನಿದ್ದೆ ಮಾಡಲ್ಲ, ನಮಗೂ ಮಲಗಲು ಬಿಡುತ್ತಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ನಮ್ಮಿಂದ ಮಾಹಿತಿ ಪಡೆದು ಇಲಾಖೆಗಳ ಪರಿಶೀಲನೆ ಮಾಡಿ ಕೆಲಸ ಕಾರ್ಯ ನಡೆಸುತ್ತಿದ್ದಾರೆ. ಶ್ರಮ ಹಾಕಿ‌ ಕೆಲಸ ಮಾಡುತ್ತಿದ್ದಾರೆ ಎಂದು ತೇಪೆ ಹಚ್ಚಿದರು.

ಮಾಧ್ಯಮದವರ ಜೊತೆ ಮಾತನಾಡುತ್ತಿರುವ ತೋಟಗಾರಿಕಾ ಸಚಿವ ನಾರಾಯಣ ಗೌಡ

ಕೊರೊನಾ ನಿಯಂತ್ರಣ ವಿಚಾರದಲ್ಲಿ ಇಡೀ‌ ಜಗತ್ತಿಗೆ ಭಾರತ ಏನು ಎನ್ನುವುದನ್ನು ತೋರಿಸಿಕೊಡಲಾಗಿದೆ. ಮುಂದೆ ಒಳ್ಳೆಯ ದಿನಗಳು ಬರಲಿವೆ, ನಾವು ಟೀಕೆ ಟಿಪ್ಪಣಿ ಮಾಡಲ್ಲ, ಮುಂದೆ ಕೈಗಾರಿಕೆ, ಜವಳಿ ಸೇರಿದಂತೆ ಎಲ್ಲಾ ಚಟುವಟಿಕೆ ಆರಂಭಗೊಳ್ಳಲಿದ್ದು, ನಾವು ಕೆಲಸ ಮಾಡಿ ತೋರಿಸಲಿದ್ದೇವೆ ಎಂದರು‌.

ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೂ ಅನುಕೂಲವಾಗುವ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮಂಡ್ಯಕ್ಕೆ 18.5 ಕೋಟಿ ಅನುದಾನ ಕೊಟ್ಟಿದ್ದಾರೆ. ಬರೀ 2.5 ಕೋಟಿ ಮಾತ್ರ ವೆಚ್ಚವಾಗಿದೆ. ದಾ‌ನಿಗಳೇ ಹೆಚ್ಚಿನ‌ ಸಂಖ್ಯೆಯಲ್ಲಿ ದೇಣಿಗೆ ನೀಡುತ್ತಿದ್ದಾರೆ ಎಂದು ಅನುದಾನ ನೀಡುತ್ತಿಲ್ಲ ಎನ್ನುವ ಆರೋಪವನ್ನು ತಳ್ಳಿಹಾಕಿದರು.

ABOUT THE AUTHOR

...view details