ಬೆಂಗಳೂರು:ಬಹುಮತ ಸಾಬೀತುಪಡಿಸಲು ಹೆಣಗಾಡುತ್ತಿರುವ ರಾಜ್ಯ ಮೈತ್ರಿ ನಾಯಕರಿಗೆ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸಿಹಿ ಸುದ್ದಿ ನೀಡಿದ್ದಾರೆ.
ಕರ್ನಾಟಕದಲ್ಲಿ ತಮ್ಮ ಏಕೈಕ ಶಾಸಕ ಎನ್. ಮಹೇಶ್ ಮೈತ್ರಿ ಸರ್ಕಾರವನ್ನುಬೆಂಬಲಿಸಲಿದ್ದಾರೆ. ಇವರಿಗೆ ಈ ಸಂಬಂಧ ನಿರ್ದೇಶನ ನೀಡಿರುವುದಾಗಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಚಾಮರಾಜನಗರ ಕೊಳ್ಳೆಗಾಲ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎನ್. ಮಹೇಶ್ ಗೆಲುವು ಸಾಧಿಸಿದ್ದರು.
ಮೈತ್ರಿ ಸರ್ಕಾರದಲ್ಲಿ ಇವರಿಗೆ ಸಚಿವ ಸ್ಥಾನ ಕೂಡ ಲಭಿಸಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವಿನ ಸಂಬಂಧ ಹಳಸಿದ ಜೊತೆಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭ ಎಸ್ಪಿ ಹಾಗೂ ಬಿಎಸ್ಪಿ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ದೂರವಿಟ್ಟಿದ್ದರು. ಇದರಿಂದಾಗಿ ರಾಜ್ಯದಲ್ಲಿ ಕೂಡ ಎನ್ ಮಹೇಶ್ ಅವರಿಂದ ರಾಜಿನಾಮೆ ಪಡೆಯುವಂತೆ ಮಾಯಾವತಿ ನಿರ್ದೇಶನ ನೀಡಿದ್ದರು. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹೇಶ್ ತದನಂತರದ ದಿನಗಳಲ್ಲಿ ತಟಸ್ಥರಾಗಿ ಉಳಿದಿದ್ದರು.
ಇಂದು ಬೆಳಿಗ್ಗೆ ಕೂಡ ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭ ಮಾಯಾವತಿ ನಿರ್ದೇಶನ ನೀಡಿದರೆ ಮಾತ್ರ ತಾವು ಬೆಂಬಲ ಸೂಚಿಸುವುದಾಗಿ ಹಾಗೂ ವಿಧಾನಸಭೆ ಬಹುಮತ ಸಾಬಿತು ಸಂದರ್ಭ ಉಪಸ್ಥಿತರಿದ್ದು ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವುದಾಗಿ ತಿಳಿಸಿದ್ದರು.
ಇದೀಗ ಮಾಯಾವತಿ ನೀಡಿರುವ ನಿರ್ದೇಶನ ಹಿನ್ನೆಲೆ ನಾಳೆ ಅವರು ಸದನಕ್ಕೆ ಹಾಜರಾಗಲಿದ್ದು ಮೈತ್ರಿ ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸಲಿದ್ದಾರೆ.