ಕರ್ನಾಟಕ

karnataka

ETV Bharat / state

ಮಳೆಗಾಲ ಆರಂಭವಾದ್ರೂ ಪೂರ್ಣಗೊಳ್ಳದ ಕಾಮಗಾರಿಗಳು ; ಈ ಬಗ್ಗೆ ಬಿಬಿಎಂಪಿ ಹೇಳೋದೇನು?

ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿ ಗಂಗಾಧರ್ ತಿಳಿಸಿದ್ದು, ಕಾಮಗಾರಿ ರಾಜಕಾಲುವೆ ಅಡಿಭಾಗದಲ್ಲೇ ನಡೆಯುತ್ತಿದ್ದರಿಂದ ಮಣ್ಣು ತೆರವು ಮಾಡಿ ನೀರು ಬಿಡಲಾಗಿದೆ. ನವೆಂಬರ್ ಬಳಿಕ ಜಲಮಂಡಳಿ ಕೆಲಸ ಮುಂದುವರಿಯಲಿದೆ ಎಂದು ಎಂಜಿನಿಯರ್‌ ಪ್ರಹ್ಲಾದ್ ಸ್ಪಷ್ಟನೆ ನೀಡಿದ್ದಾರೆ.

By

Published : Jun 3, 2020, 5:03 PM IST

mansoon-work-started-in-bangalore
ಮಳೆಗಾಲ ಆರಂಭವಾದ್ರೂ ಪೂರ್ಣಗೊಳ್ಳದ ಕಾಮಗಾರಿಗಳು; ಈ ಬಗ್ಗೆ ಬಿಬಿಎಂಪಿ ಹೇಳೋದೇನು?

ಬೆಂಗಳೂರು :ದೇಶದ ಹಲವೆಡೆ ಈಗಾಗಲೇ ಅವಧಿ ಪೂರ್ವವೇ ಮುಂಗಾರು ಆರಂಭವಾಗಿದೆ. ಕೇರಳ, ಮಹಾರಾಷ್ಟ್ರ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇತ್ತ ಬೆಂಗಳೂರು ನಗರದಲ್ಲಿ ಮಳೆಗಾಲ ಎದುರಿಸಲು ಬಿಬಿಎಂಪಿ ಸಜ್ಜಾಗಿದೆ ಎಂದು ಹೇಳಿದ್ರು. ನಗರದ ಅಲ್ಲಲ್ಲಿ ಅರ್ಧದಲ್ಲೇ ನಿಂತ ರಸ್ತೆ ಕಾಮಗಾರಿಗಳು, ಚರಂಡಿ ಕೆಲಸಗಳು ರಿಪೇರಿಗೆ ಬಂದ ಫುಟ್‌ಪಾತ್‌ಗಳು ಕಣ್ಣಿಗೆ ಬೀಳುತ್ತಿವೆ.

ಮಳೆಗಾಲ ಆರಂಭವಾದ್ರೂ ಪೂರ್ಣಗೊಳ್ಳದ ಕಾಮಗಾರಿಗಳು.. ಈ ಬಗ್ಗೆ ಬಿಬಿಎಂಪಿ ಹೇಳೋದೇನು?
ಈವರೆಗೆ ಲಾಕ್‌ಡೌನ್‌ನಿಂದಾಗಿ ಸ್ಥಗಿತವಾಗಿದ್ದ ಕೆಲಸಗಳು ಕಾರ್ಮಿಕರ ಕೊರತೆಯಿಂದ ಕುಂಟುತ್ತಾ ಸಾಗಿತ್ತು. ಇದೀಗ ಕಳೆದೊಂದು ವಾರದಿಂದ ಮಳೆ ಆರಂಭವಾಗಿರುವುದರಿಂದ ಕೆಲಸಗಳು ನಿಂತು ಹೋಗಿವೆ. ನಗರದ ಮಳೆನೀರು ಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಮಾತ್ರ ಶೇ. 100ರಷ್ಟು ಸಂಪೂರ್ಣವಾಗಿವೆ. ನಿರ್ವಹಣೆ ಕೆಲಸವೂ ನಡೆಯುತ್ತಿದೆ ಎಂದು ಮುಖ್ಯ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ. ಹೀಗಾಗಿ ಮಳೆ ಬಂದರೆ ರಾಜಕಾಲುವೆಗಳು ಉಕ್ಕಿ ಹರಿದು ವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಕಡಿಮೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋರಮಂಗಲಕ್ಕೆ ತಪ್ಪಿಲ್ಲ ಜಲಕಂಟಕ :ಕೋರಮಂಗಲದಲ್ಲಿ ಪ್ರತೀ ಬಾರಿ ಜೋರು ಮಳೆ ಬಂದಾಗ ರಾಜಕಾಲುವೆ ತುಂಬಿ ಹರಿದು ವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿತ್ತು. ಆದರೆ, ಈ ಬಾರಿ ಎನ್‌ಜಿಟಿ ಆದೇಶದ ಮೇರೆಗೆ ಜಲಮಂಡಳಿ ಒಳಚರಂಡಿ ನೀರನ್ನು ಪ್ರತ್ಯೇಕ ಪೈಪ್‌ಲೈನ್ ಮೂಲಕ ಕೆ ಸಿ ವ್ಯಾಲಿ ಶುದ್ಧೀಕರಣ ಘಟಕಕ್ಕೆ ಸಾಗಿಸುವ ಕಾಮಗಾರಿ ನಡೆಸುತ್ತಿತ್ತು. ವೆಟ್‌ವೆಲ್ ನಿರ್ಮಾಣ ಮಾಡಿ, ಎನ್‌ಜಿವಿ ಅಪಾರ್ಟ್‌ಮೆಂಟ್‌ನಿಂದ ನೇರವಾಗಿ ಕೆಸಿ ವ್ಯಾಲಿಗೆ ಒಳಚರಂಡಿ ನೀರನ್ನು ಸಾಗಿಸುವ ಪೈಪ್ ಅಳವಡಿಕೆ ಈಗಾಗಲೇ 5 ಕಿ.ಮೀ ಮುಗಿದಿದೆ. ಆದರೆ, ಒಂದು ಕಿ.ಮೀ ಬಾಕಿ ಇರುವಷ್ಟರಲ್ಲಿ ಮಳೆ ಬಂದಿದೆ.

ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿ ಗಂಗಾಧರ್ ತಿಳಿಸಿದ್ದು, ಕಾಮಗಾರಿ ರಾಜಕಾಲುವೆ ಅಡಿಭಾಗದಲ್ಲೇ ನಡೆಯುತ್ತಿದ್ದರಿಂದ ಮಣ್ಣು ತೆರವು ಮಾಡಿ ನೀರು ಬಿಡಲಾಗಿದೆ. ನವೆಂಬರ್ ಬಳಿಕ ಜಲಮಂಡಳಿ ಕೆಲಸ ಮುಂದುವರಿಯಲಿದೆ ಎಂದು ಎಂಜಿನಿಯರ್‌ ಪ್ರಹ್ಲಾದ್ ಸ್ಪಷ್ಟನೆ ನೀಡಿದ್ದಾರೆ. ಹೊಸೂರು ರಸ್ತೆ, ಇಂದಿರಾ ನಗರ 80 ಫೀಟ್ ರಸ್ತೆಯಲ್ಲಿ ವೈಟ್‌ಟ್ಯಾಪಿಂಗ್ ನಡೆಯುತ್ತಿದ್ದು, ಮಳೆ ಬಂದರೆ ಕೆಲಸ ನಡೆಸಲು ಸಾಧ್ಯವಿಲ್ಲ. ಇದಲ್ಲದೆ ಯಶವಂತಪುರ ರಸ್ತೆ, ಮೌರ್ಯ ಸರ್ಕಲ್ ಬಳಿಯ ರಸ್ತೆ ಕಾಮಗಾರಿಯೂ ಮಳೆಗಾಲ ಬಂದ್ರೂ ಮುಗಿದಿಲ್ಲ.

ಭರದಿಂದ ಸಾಗಿದ ನಿರ್ವಹಣೆ ಕೆಲಸ :ಮಳೆಗಾಲ ಸಂಬಂಧ ಕಂದಾಯ ಸಚಿವರ ನೇತೃತ್ವದಲ್ಲಿ 3 ಬಾರಿ ಸಭೆ ನಡೆದಿದೆ. ಈ ವೇಳೆ ಜಲಮಂಡಳಿ ಹಾಗೂ ಬಿಬಿಎಂಪಿಗೆ ನಿರ್ವಹಣೆ ಕೆಲಸಗಳನ್ನು ಸೂಕ್ತ ಸಮಯದಲ್ಲಿ ಮುಗಿಸುವಂತೆ ತಿಳಿಸಲಾಗಿದೆ. ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಬಿಬಿಎಂಪಿ ಆಯುಕ್ತರಾದ ಅನಿಲ್‌ಕುಮಾರ್, ರಸ್ತೆ ಬದಿಯ ಚರಂಡಿಗಳ ಹೂಳು ಹಾಗೂ ಮಳೆ ನೀರುಗಾಲುವೆಗಳ ಹೂಳು ತೆಗೆಯಲಾಗಿದೆ. ಟಾಸ್ಕ್ ಫೋರ್ಸ್‌ಗಳನ್ನು ಪ್ರತೀ ವಲಯದಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿದೆ.

ಹೈಕೋರ್ಟ್ ಸೂಚನೆಯಂತೆ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗಗಳಲ್ಲಿಯೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆ ಪ್ರದೇಶವನ್ನು ಸಮರ್ಪಕವಾಗಿ ನಿರ್ವಹಣೆ, ಮ್ಯಾನ್ ಹೋಲ್‌ಗಳ ಮುಚ್ಚಳ, ಚರಂಡಿಗಳ ಸ್ಲ್ಯಾಬ್ ಇಲ್ಲದಿದ್ದ ಕಡೆ ಕೂಡಲೇ ಸರಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details