ಬೆಂಗಳೂರು:ಒಮಿಕ್ರೋನ್ ಬಗ್ಗೆ ರಾಜ್ಯದ ಜನರು ಭಯಪಡಬೇಕಾಗಿಲ್ಲ. ನಮ್ಮ ರಾಜ್ಯಕ್ಕೆ ಅದಿನ್ನೂ ಬಂದಿಲ್ಲ, ಬರೋದು ಇಲ್ಲ. ಯಾರೂ ಆತಂಕಗೊಳ್ಳುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಡಿನ ಜನತೆಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ರಾಜ್ಯಕ್ಕೆ ಮತ್ತೆ ಬರುವುದಿಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜನರಿಗೆ ಜಾಗೃತಿ ಮೂಡಿಸಬೇಕು. ಬರೀ ಕೇರಳ ಅಂತ ಇದ್ದಾರೆ, ಆದ್ರೆ ಎಲ್ಲಾ ಕಡೆ ಗಮನಹರಿಸಬೇಕು. ಜನರಿಗೆ ಗಾಬರಿಪಡಿಸುವಂಥ ಕೆಲಸ ಆಗಬಾರದು. ಸರ್ಕಾರ ಮುಂಜಾಗ್ರತಾ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯುತ್ತೆ, ಅದಕ್ಕೆ ಅಧಿವೇಶನ ನಡೆಯಬಾರದು ಅಂತಾರೆ ಅಷ್ಟೇ. ಬೆಳಗಾವಿ ಅಧಿವೇಶನ ನಡೆಸಬೇಕು, ಯಾವುದೋ ಕಾರಣ ನೀಡಿ ಮುಂದೂಡುವುದು ಸರಿಯಲ್ಲ ಎಂದರು.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವ್ಯಾಕ್ಸಿನ್ ಪ್ರಮಾಣ ಕಡಿಮೆ ಆಗಿರುವ ವಿಚಾರ ಕುರಿತು ಮಾತನಾಡಿ, ಬಿಜೆಪಿಯೇತರ ರಾಜ್ಯಗಳು ಅಂತಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ವ್ಯಾಕ್ಸಿನ್ ಕಾರ್ಯಕ್ರಮ ಪೂರ್ಣಗೊಂಡಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೇವಲ ವ್ಯಾಕ್ಸಿನ್ ಅಷ್ಟೇ ಅಲ್ಲ, ಟ್ಯಾಕ್ಸ್ ಕಲೆಕ್ಷನ್ ಕೂಡ ಕಡಿಮೆ ಆಗಿದೆ. ಈ ಬಗ್ಗೆ ಅಂಕಿ-ಅಂಶಗಳ ಸಮೇತ ನಾನು ಮಾಧ್ಯಮಗಳ ಮುಂದೆ ಬರ್ತೇನೆ ಎಂದು ಡಿಕೆಶಿ ಹೇಳಿದ್ರು.