ಬೆಂಗಳೂರು: ಮೈಸೂರು ಪಾಕ್ನಲ್ಲೇ ಅದರ ಮೂಲವೂ ಅಡಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿ, ಯಾಕೆ ಅವರು ಹೀಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರುಪಾಕ್ನಲ್ಲೇ ಅದರ ಮೂಲವೂ ಅಡಗಿದೆ: ದಿನೇಶ್ ಗುಂಡೂರಾವ್ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಿರ್ಮಲಾ ಸೀತಾರಾಮನ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಮೈಸೂರು ಅಲ್ದೆ ಇದ್ರೆ ಮಧುರೈ ಪಾಕ್ ಅಂತಾ ಕರೆಯಬೇಕಿತ್ತು ಎಂದರು.
ನೆರೆ ವಿಚಾರ ಬಿಟ್ಟು ಬಿಜೆಪಿಯವರು ಮತ್ತಿನ್ನೇನೋ ಮಾತಾಡ್ತಾ ಇದ್ದಾರೆ. ದಿಕ್ಕುತಪ್ಪಿಸೋ ಕೆಲಸ ಬಿಜೆಪಿಯಿಂದ ಆಗ್ತಿದೆ. ಈಶ್ವರಪ್ಪನವರಿಗೆ ಮಂತ್ರಿಯಾಗೋ ಯೋಗ್ಯತೆ ಇಲ್ಲ. ಪ್ರತಿ ಪಕ್ಷದ ನಾಯಕನ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ. ಸದಾನಂದಗೌಡರು ಸಿದ್ದರಾಮಯ್ಯ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಹಿಂದೆ ಯಾರು ಸದಾನಂದ ಗೌಡರನ್ನ ಸಿಎಂ ಮಾಡಿದ್ರು, ಅಂತವರಿಗೆ ಸದಾನಂದಗೌಡರು ಮೋಸ ಮಾಡಿದರು. ಉಪ ಚುನಾವಣೆ ಸಂಬಂಧ ನಡೆದ ಸಭೆಗೆ ಪರಮೇಶ್ವರ್ ಅವರಿಗೆ ಆಹ್ವಾನ ನೀಡಿದ್ವಿ. ನಾನೇ ಒಂದ್ಸಾರಿ ಅವರ ಗಮನಕ್ಕೆ ತಂದಿದ್ದೆ ಎಂದರು.
ದೇಶದ ಪರಿಸ್ಥಿತಿ ಕುಲಗೆಟ್ಟು ಹೋಗಿದೆ. ಈ ವಿಚಾರವನ್ನ ಬೇರೆಡೆ ಸೆಳೆಯಲು ಹಿಂದಿ ಹೇರಿಕೆ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಹಿಂದಿ ಬಗ್ಗೆ ಗೌರವವಿದೆ. ತೆಲುಗು, ತಮಿಳು ಭಾಷೆಗಳ ಬಗ್ಗೆಯೂ ಗೌರವವಿದೆ. ಆದ್ರೆ ಭಾಷೆ ಭಾಷೆಯ ನಡುವೆ ಘರ್ಷಣೆ ಉಂಟು ಮಾಡೋ ಕೆಲಸವನ್ನ ಅಮಿತ್ ಶಾ ಮಾಡ್ತಿದ್ದಾರೆ. ನಮಗೆ ಕನ್ನಡ ಮೊದಲು, ಆಮೇಲೆ ಬೇರೆ ಭಾಷೆ. ಹಿಂದಿಯ ಬಗ್ಗೆಯೂ ನಮಗೆ ಗೌರವವಿದೆ. ಬೇರೆ ಭಾಷಿಕರು, ಹಿಂದಿ ಭಾಷಿಕರ ನಡುವೆ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಅಮಿತ್ ಶಾ ಮಾಡಿದ್ದಾರೆ. ನಮ್ಮನಮ್ಮಲ್ಲಿಯೇ ಭಿನ್ನಾಬಿಪ್ರಾಯ ಸೃಷ್ಟಿಮಾಡುತ್ತಿದ್ದಾರೆ ಎಂದರು.
ಸರ್ಕಾರ ರಚನೆಗೆ ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಶಾಸಕರನ್ನ ಖರೀದಿಸೋಕೆ ಮಾಡಿದ್ದಾರೆ. ಹೀಗಾಗಿಯೇ ವರ್ಗಾವಣೆ ದಂಧೆಗೆ ಕೈಹಾಕಿದ್ದಾರೆ. ಮೊದಲ ದಿನದಿಂದಲೂ ವರ್ಗಾವಣೆ ದಂಧೆ ನಡೆಸ್ತಿದ್ದಾರೆ. ಹಣ ಖರ್ಚು ಮಾಡಿದ ಮೇಲೆ ಶೇಖರಿಸಬೇಕಲ್ಲ. ಇವತ್ತು ಯಾವ ಅಭಿವೃದ್ಧಿ ಕೆಲಸವೂ ಆಗ್ತಿಲ್ಲ. ನಮ್ಮ ಸರ್ಕಾರಕ್ಕೆ ಟೇಕಾಫ್ ಆಗಿಲ್ಲ ಅಂತಿದ್ರು. ಅವರ ಇಂಜಿನ್ ನೇ ಚಾಲೂ ಆಗಿಲ್ಲ. ಇಂತಹ ವಿಚಾರದ ಬಗ್ಗೆ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಇದನ್ನೂ ಸಂಸದರು ಸಮರ್ಥನೆ ಮಾಡೋಕೆ ಹೊರಟಿದ್ದಾರೆ ಎಂದರು.