ಕರ್ನಾಟಕ

karnataka

ವೈದ್ಯರ ದುರ್ನಡತೆ ತಡೆ ಕಾನೂನು, ಆಸ್ಪತ್ರೆ ಹಾಗೂ ಕೆಎಂಸಿಯು ಹಣ ವಸೂಲಿಗೆ ಅಸ್ತ್ರವಾಗಬಾರದು: ಹೈಕೋರ್ಟ್

ವೈದ್ಯರ ವೃತ್ತಿಪರ ದುರ್ನಡತೆ ಪ್ರಕರಣಗಳಲ್ಲಿ ಕೆಎಂಸಿಯಂತಹ ಶಿಸ್ತು ಪ್ರಾಧಿಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ದೂರು ದಾಖಲಿಸುವ ಮುನ್ನ ಆರೋಪದಲ್ಲಿನ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

By

Published : Oct 8, 2022, 6:34 AM IST

Published : Oct 8, 2022, 6:34 AM IST

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:ವೈದ್ಯರ ವೃತ್ತಿಪರ ದುರ್ನಡತೆ ತಡೆಗೆ ಸಂಬಂಧಿಸಿದ ಕಾನೂನುಗಳನ್ನು ಆಸ್ಪತ್ರೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯು (ಕೆಎಂಸಿ) ಶಿಸ್ತು ಕ್ರಮದ ಹೆಸರಿನಲ್ಲಿ ವೈದ್ಯರಿಂದ ಹಣ ವಸೂಲಿ ಮಾಡುವ ಅಸ್ತ್ರವಾಗಿ ಬಳಕೆ ಮಾಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವೃತ್ತಿಪರ ದುರ್ನಡತೆ ಆರೋಪದಲ್ಲಿ ಕೆಎಂಸಿ ಮುಂದೆ ನೋವಾ ಮೆಡಿಕಲ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ದಾಖಲಿಸಿರುವ ದೂರು ಮತ್ತು ಜಾರಿಯಾಗಿದ್ದ ನೋಟಿಸ್ ರದ್ದು ಕೋರಿ ಡಾ. ನಾಗೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ವೈದ್ಯರ ವೃತ್ತಿಪರ ದುರ್ನಡತೆ ಪ್ರಕರಣಗಳಲ್ಲಿ ಕೆಎಂಸಿಯಂತಹ ಶಿಸ್ತು ಪ್ರಾಧಿಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ದೂರು ದಾಖಲಿಸುವ ಮುನ್ನ ಆರೋಪದಲ್ಲಿನ ಸತ್ಯಾಸತ್ಯತೆ ಪರಿಶೀಲಿಸಬೇಕು. ವೈದ್ಯರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ನಡೆಸುವುದು ಗಂಭೀರ ವಿಚಾರವಾಗಿರುತ್ತದೆ. ಅದು ಸಾರ್ವಜನಿಕ ಹಿತಾಸಕ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಎಂಸಿ ಅಂಚೆ ಕಚೇರಿಯಂತೆ ನಡೆದುಕೊಳ್ಳಬಾರದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಈ ಪ್ರಕರಣದಲ್ಲಿ ವೈದ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವು ರೋಗಿ ಅಥವಾ ಅವರಿಗೆ ಸಂಬಂಧಿಸಿದವರು ಕೆಎಂಸಿ ಮುಂದೆ ಯಾವ ಕಾರಣಕ್ಕೆ ದೂರು ದಾಖಲಿಸಿಲ್ಲ. ಮತ್ತು ಅದಕ್ಕೆ ಕಾರಣವನ್ನು ದೂರಿನಲ್ಲಿ ವಿವರಿಸಿಲ್ಲ. ಜತೆಗೆ ನೋವಾ ಸಹ ತನ್ನ ದೂರಿನಲ್ಲಿ ವಿವರಣೆ ನೀಡಬೇಕಿತ್ತು. ವೃತ್ತಿಪರ ದುರ್ನತಡೆ ಸಂಬಂಧಿಸಿದ ವ್ಯಾಖ್ಯಾನ ವಿಸ್ತಾರವಾಗಿದ್ದು, ಪ್ರಕರಣದಲ್ಲಿ ಹೇಳಿರುವಂತೆ ಬರುವುದಿಲ್ಲ. ಕಾನೂನಿನ ವ್ಯಾಪ್ತಿಯಡಿ ದೂರಿಗೆ ಮಾನ್ಯತೆ ಇಲ್ಲವಾಗಿದೆ. ನಾಗೇಶ್ ವಿರುದ್ಧ ಪಿ ಸೌಮ್ಯ ಎಂಬುವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಅಭಿಪ್ರಾಯ ಪಡೆಯಲಾಗಿದೆ. ಆ ಕುರಿತ ವರದಿಯಲ್ಲಿ ನಾಗೇಶ್ ಕಡೆಯಿಂದ ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ಇಲ್ಲ ಎಂಬುದಾಗಿ ಗೊತ್ತಾಗಿದೆ ಎಂದು ತಿಳಿಸಿದ ಹೈಕೋರ್ಟ್, ಕೆಎಂಸಿಯ ನೋಟಿಸ್​ ಅನ್ನು ರದ್ದುಪಡಿಸಿದೆ. ಅಲ್ಲದೆ, ನೋವಾ ಮೆಡಿಕಲ್ ಸೆಂಟರ್ ಮತ್ತು ಪಿ.ಸೌಮ್ಯ ಅವರು ಬಯಸಿದಲ್ಲಿ ಕಾನೂನು ಪ್ರಕಾರ ಸಿವಿಲ್ ಪರಿಹಾರ ಪಡೆಯಲು ಸ್ವತಂತ್ರರಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನೂ?

ಡಾ. ನಾಗೇಶ್ ಅವರು 2011ರಲ್ಲಿ ನೋವಾ ಮೆಡಿಕಲ್ ಸೆಂಟರ್‌ನಲ್ಲಿ ‘ವಿಸಿಟಿಂಗ್ ಡಾಕ್ಟರ್’ ಆಗಿದ್ದರು. ಪಿ.ಸೌಮ್ಯ ಎಂಬುವರ ಪತಿ ಜಯಪ್ರಕಾಶ್ ಅವರು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ವೈದ್ಯಕೀಯ ಸಂಕೀರ್ಣತೆ ಸೃಷ್ಟಿಯಾದ ಪರಿಣಾಮ ಉತ್ತಮ ವೈದ್ಯಕೀಯ ಸೌಲಭ್ಯಕ್ಕಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಜಯಪ್ರಕಾಶ್ ಅವರನ್ನು 2011ರ ಮಾ. 29ರಂದು ವರ್ಗಾಯಿಸಿದ್ದರು. ಇದರಿಂದ ಡಾ. ನಾಗೇಶ್ ವಿರುದ್ಧ ಪಿ.ಸೌಮ್ಯ ಅವರು 2011ರ ಅ.2ರಂದು ಕೆಂಗೇರಿ ಠಾಣೆಗೆ ಅಪರಾಧಿಕ ಪ್ರಚೋದನೆ ಮತ್ತು ಗಂಭೀರ ಹಲ್ಲೆ ಆರೋಪದಡಿ ದೂರು ದಾಖಲಿಸಿದ್ದರು.

ಅಲ್ಲದೆ, 2011ರ ಅ.19ರಂದು ಸೌಮ್ಯ ಅವರು ನೋವಾ ಮೆಡಿಕಲ್ ಸೆಂಟರ್‌ಗೆ ತೆರಳಿ, ಖಾಸಗಿ ಆಸ್ಪತ್ರೆಯಲ್ಲಿ ಆಗಿರುವ 40 ಲಕ್ಷ ರೂ. ಬಿಲ್ ಅನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದರು. ಆ ಹಣವನ್ನು ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದ ನೋವಾ, ಡಾ. ನಾಗೇಶ್‌ಗೆ ಲೀಗಲ್ ನೋಟಿಸ್ ಜಾರಿಗೊಳಿಸಿ ಅಷ್ಟೂ ಹಣದ ಮರುಪಾವತಿಗೆ ಸೂಚಿಸಿತ್ತು. ಅದಕ್ಕೆ ಡಾ. ನಾಗೇಶ್ ನಿರಾಕರಿಸಿದ್ದರು. ಇದರಿಂದ ನೋವಾ, ಕೆಎಂಸಿಗೆ ವೃತ್ತಿಪರ ದುರ್ನಡತೆ ಆರೋಪ ಸಂಬಂಧ ದೂರು ದಾಖಲಿಸಿತ್ತು. ಕೆಎಂಸಿ ನಾಗೇಶ್ ಅವರಿಗೆ ನೋಟಿಸ್ ನೀಡಿದ್ದು, ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಓದಿ:ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಆರೋಪ: ಇಬ್ಬರು ಐಎಎಸ್ ಅಧಿಕಾರಿಗಳು ಸೇರಿ ಇತರರ ವಿರುದ್ಧದ ಪ್ರಕರಣ ರದ್ದು

ABOUT THE AUTHOR

...view details