ಕರ್ನಾಟಕ

karnataka

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗು.. ಬೇಕಿದೆ 17 ಕೋಟಿಯ ಇಂಜೆಕ್ಷನ್.. ಪ್ರಧಾನಿಗೆ ಸಿಎಂ ಪತ್ರ

By ETV Bharat Karnataka Team

Published : Nov 1, 2023, 10:37 PM IST

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ನೆರವಾಗುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು :ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಇದಕ್ಕೆ ಆಮದು ಸಂಕದಿಂದ ವಿನಾಯಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆಯುವ ಮೂಲಕ ವಿನಂತಿಸಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ? :ಪ್ರಧಾನಿಗೆ ಪತ್ರ ಬರೆದಿರುವ ಅವರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ ಮೌರ್ಯ ಎಂಬ ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಎಂಬ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ. ಹೀಗಾಗಿ ಮಗುವಿನ ಚಿಕಿತ್ಸೆಗಾಗಿ ಕೇಂದ್ರದಿಂದ ಹಣಕಾಸಿನ ನೆರವು ನೀಡುವಂತೆ ಕೋರಿದ್ದಾರೆ. ಅಗತ್ಯವಿರುವ ಝೋಲ್ಗೆನ್ಸ್ಮಾ ಇಂಜೆಕ್ಷನ್ ಮೇಲಿನ ಆಮದು ತೆರಿಗೆಯನ್ನು ಮನ್ನಾ ಮಾಡುವ ಬಗ್ಗೆ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.

"ನಮ್ಮ ವೈದ್ಯಕೀಯ ಸಮುದಾಯವು Zolgensma ಎಂಬ ಚುಚ್ಚುಮದ್ದಿನ ಮೂಲಕ ಕಾಯಿಲೆ ಗುಣಪಡಿಸಬಹುದು ಎಂದು ನಮಗೆ ತಿಳಿಸಿದೆ. ಈ ಒಂದು ಡೋಸ್ ಔಷಧದ ವೆಚ್ಚವು ಸುಮಾರು 17.5 ಕೋಟಿ ರೂಪಾಯಿಗಳಷ್ಟಿದೆ. ಹೀಗಾಗಿ ಈ ಚಿಕಿತ್ಸೆಯನ್ನು ಪಡೆಯಲು ಕುಟುಂಬಕ್ಕೆ ಅಸಾಧಾರಣ ಸವಾಲಾಗಿದೆ " ಎಂದು ಅವರು ಹೇಳಿದ್ದಾರೆ.

"ಔಷಧದ ಬೆಲೆಯೇ ಅಗಾಧವಾಗಿದೆ. ಅಲ್ಲದೇ ಇದಕ್ಕೆ ಸೇರಿಸಿದ ಆಮದು ತೆರಿಗೆಗಳು ಆರ್ಥಿಕ ಹೊರೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಈ ಜೀವರಕ್ಷಕ ಔಷಧವನ್ನು ಖರೀದಿಸುವುದು ಅವರಿಗೆ ಅಸಾಧ್ಯವಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತನ್ನ ಪತ್ರದಲ್ಲಿ ಎರಡು ನಿರ್ಣಾಯಕ ಅಂಶಗಳಲ್ಲಿ ಪ್ರಧಾನಿ ಮೋದಿಯವರಿಂದ ಮಧ್ಯಪ್ರವೇಶವನ್ನು ಕೋರಿದ್ದಾರೆ: ಮೊದಲನೆಯದಾಗಿ, ಮಗುವಿನ ಚಿಕಿತ್ಸೆಗೆ ಅಗತ್ಯವಿರುವ ಝೋಲ್ಗೆನ್ಸ್ಮಾ ಮೇಲಿನ ಆಮದು ತೆರಿಗೆಗಳನ್ನು ಮನ್ನಾ ಮಾಡುವಂತೆ ಹಣಕಾಸು ಸಚಿವಾಲಯಕ್ಕೆ ನಿರ್ದೇಶಿಸುವುದು. ಎರಡನೆಯದಾಗಿ, ಚುಚ್ಚುಮದ್ದಿನ ಸಂಗ್ರಹಣೆಗೆ ಸಹಾಯ ಮಾಡಲು PM CARES ನಿಧಿಯಿಂದ ವಿತ್ತೀಯ ಬೆಂಬಲವನ್ನು ನಿಯೋಜಿಸುವುದನ್ನು ಪರಿಗಣಿಸುವುದು. ಈ ಸಹಾನುಭೂತಿಯ ಕ್ರಮಗಳು ಮೌರ್ಯ ಅವರ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಕಿರಿಯ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ರಾಷ್ಟ್ರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನಮ್ಮ ಸಾಮೂಹಿಕ ಬೆಂಬಲದಿಂದ ಯುವ ಮೌರ್ಯ ಮತ್ತು ಅವರ ಕುಟುಂಬಕ್ಕೆ ಭರವಸೆಯ ಕಿರಣವನ್ನು ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. "ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕಾಗಿ ನಾನು ನಿಮಗೆ ಧನ್ಯವಾದಗಳು ಮತ್ತು ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

ABOUT THE AUTHOR

...view details