ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಶಾಸಕ ಸಿ ಟಿ ರವಿ ಅವರು ಬಾಡೂಟ ಸೇವಿಸಿ ಭಟ್ಕಳದ ನಾಗಬನ ಹಾಗೂ ಕರಿಬಂಟ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಾಡೂಟ ಸೇವಿಸುವಾಗ ತೆಗೆದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗಿದೆ. ಸಿ. ಟಿ ರವಿಯವರೇ, ಸತ್ಯ ಬಹಿರಂಗಪಡಿಸುವಿರೆ ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಕ್ಷ, ತಲೆಗೆ ಸುರಿದ ನೀರು ಕಾಲಿಗೆ ಬರಲೇಬೇಕಲ್ಲ, ರವಿಯವರೆ! ಬರೀ ಇಂತಹ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಮುಖ್ಯ ಸಂಗತಿಗಳಿಂದ ಜನರನ್ನು ವಿಮುಖರನ್ನಾಗಿಸುತ್ತಿದ್ದ ಬಿಜೆಪಿಯ 'ಹುರಿಯಾಳು' ಈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಏನು ಹೇಳುತ್ತಿದೆ ? 'ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ', ಎಂಬಂತಾಗಲಿಲ್ಲವೆ? ಎಂದು ಲೇವಡಿ ಮಾಡಿದೆ.
ಅಂದಹಾಗೆ, ನೀವು ತಿಂದ ಮಾಂಸ ಯಾವುದು ಎಂದು ಹೇಳುತ್ತೀರಾ, ರವಿಯವರೆ? ಆಹಾರ ಸೇವನೆ ವೈಯಕ್ತಿಕ ವಿಷಯ. ನಂಬಿಕೆಗಳು ಅಷ್ಟೆ. ಆದರೆ, ಎಲ್ಲದರ ಕಲಸುಮೇಲೋಗರ ಮಾಡಿ, ಜನರನ್ನು ದಿಕ್ಕು ತಪ್ಪಿಸುವ ಹೇಸಿಗೆ ರಾಜಕಾರಣ ಮಾಡುವವರಿಗೆ ಅನಿವಾರ್ಯವಾಗಿ ಈ ಪ್ರಶ್ನೆ ಕೇಳಬೇಕಿದೆ. ಆಹಾರ ಸಂಸ್ಕ್ರತಿ, ದೈವ ನಂಬಿಕೆಗಳನ್ನು ರಾಜಕಾರಣಕ್ಕೆ ಬಳಸುವ, ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಕೊಳಕು ರಾಜಕಾರಣ ಬಿಜೆಪಿಯವರ ಕಾರ್ಯವೈಖರಿ. ತಾವೇ ತೋಡಿದ ಹಳ್ಳದಲ್ಲಿ ಇಂಥವರು ಬಿದ್ದಾಗ, ಅಯ್ಯೋ ಪಾಪ ಎಂದೆನಿಸುತ್ತಷ್ಟೆ! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.